ಕಲಬುರ್ಗಿ: ನಗರದಲ್ಲಿ ಸೋಮವಾರ ಬೆಳಿಗ್ಗೆಯಿಂದ ಬಸ್ ಸಂಚಾರ ಆರಂಭವಾಗಿದೆ.
ಪ್ರಯಾಣಿಕರ ದಟ್ಟಣೆ ನೋಡಿಕೊಂಡು ವಿವಿಧ ನಗರಗಳಿಗೆ ಬಸ್ ಗಳನ್ನು ಓಡಿಸಲಾಗುತ್ತಿದೆ. ಪ್ರತಿ ಬಸ್ ಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಕೇಂದ್ರ ಬಸ್ ನಿಲ್ದಾಣದಲ್ಲಿ ಎಸಿಪಿ ಗಂಗಾಧರ ಚಿಕ್ಕಮಠ ನೇತೃತ್ವದಲ್ಲಿ ಪೊಲೀಸರು ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಹೈದರಾಬಾದ್, ವಿಜಯಪುರ, ಬೀದರ್, ಶಹಾಪುರ ಕಡೆ ಬಸ್ ಗಳ ಸಂಚಾರ ಆರಂಭವಾಗಿದೆ.
ಭಾನುವಾರ ರಾತ್ರಿ ಸರ್ಕಾರದೊಂದಿಗೆ ನಡೆದ ಮಾತುಕತೆಯಲ್ಲಿ ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರ ತಳ್ಳಿ ಹಾಕಿತ್ತು. ಆದ್ದರಿಂದ ಮುಷ್ಕರ ಮುಂದುವರಿಸುವುದಾಗಿ ನೌಕರರ ಕೂಟ ತಿಳಿಸಿತ್ತು.
ಆದರೆ ಕಲಬುರ್ಗಿಯಲ್ಲಿ ಒಂದೊಂದಾಗಿ ಬಸ್ ಗಳು ರಸ್ತೆಗಿಳಿದಿದ್ದರಿಂದ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.