ಕಮಲಾಪುರ: ತಾಲ್ಲೂಕಿನ ಸೊಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಣ್ಣಿ ಸರಫೋಸ ಬಳಿಯ ಸೋನಾರ ತಾಂಡಾದಲ್ಲಿನ ಕಾರ್ಮಿಕರಿಗೆ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗಿದ್ದು ಗುರುವಾರದಿಂದ ಆರಂಭಗೊಂಡಿದೆ.
ಈ ಕುರಿತು ಕಳೆದ ಏ.22 ರಂದು ‘ಸೋನಾರ ತಾಂಡಾದಲ್ಲಿ ಸ್ಮಶಾನ ಮೌನ’ ಶೀರ್ಷಿಕೆಯಡಿ ಪ್ರಜಾವಾಣಿ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು.
ಅದೇ ದಿನ ತಾಲ್ಲೂಕು ಪಂಚಾಯಿತಿ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶ ಜಗನ್ನಾಥ ರೆಡ್ಡಿ, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳನ್ನು ಒಳಗೊಂಡ ತಂಡ ತಾಂಡಾಕ್ಕೆ ದೌಡಾಯಿಸಿ ಮಾಹಿತಿ ಮಾಹಿತಿ ಪಡೆದಿತ್ತು. ಏ.23 ರಂದು ಎನ್ಎಂಆರ್ ತೆಗೆದು ಏ.24ರಿಂದ ಕೆಲಸ ಒದಗಿಸಲಾಗುವುದು ಎಂದು ತಿಳಿಸಿದ್ದರು.
‘ಒಟ್ಟು 33 ಜನರ ಜಾಬ್ಕಾರ್ಡ್ ಇದ್ದು 24 ಜನ ಉದ್ಯೋಗ ಖಾತ್ರಿ ಕಾಮಗಾರಿ ಕೈಗೊಳ್ಳಲು ಅರ್ಹರಿದ್ದಾರೆ. ಗುರುವಾರ 16 ಜನ ಕೆಲಸಕ್ಕೆ ಹಾಜರಾಗಿದ್ದಾರೆ. ಉಳಿದ 10 ಜನರ ಬ್ಯಾಂಕ್ ಖಾತೆ ಮತ್ತಿತರ ಸಮಸ್ಯೆಗಳಿದ್ದು ಸರಿಪಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಅವರಿಗೂ ಕೆಲಸ ಒದಗಿಸಲಾಗುವುದು’ ಎಂದು ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಜಗನ್ನಾಥ ರೆಡ್ಡಿ, ಪಿಡಿಒ ಶರಣಬಸಪ್ಪ ತಿಳಿಸಿದರು.