ಕಲಬುರ್ಗಿ: ದಲಿತ ಸಮುದಾಯದ ಹಿರಿಯ ನಾಯಕ ಕಾನ್ಶಿರಾಂ ಅವರು ತಳವರ್ಗದ ಮಾರ್ಗ ಸೂಚಕರಾಗಿದ್ದರು. ಕೋಮುವಾದಿಗಳಿಂದ ತುಳಿತಕ್ಕೊಳಗಾದ ಪರಿಶಿಷ್ಟರು ಮತ್ತು ಅಲ್ಪಸಂಖ್ಯಾತರ ಪರ ರಾಜಕೀಯ ಚಳವಳಿ ರೂಪಿಸಿ ಎದೆ ನಡುಗುವಂತೆ ಮಾಡಿದ್ದರು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾದೇವ ಧನ್ನಿ ಹೇಳಿದರು.
ನಗರದ ಹರಳಯ್ಯ ಸಮುದಾಯ ಭವನದಲ್ಲಿ ಶುಕ್ರವಾರ ಪಕ್ಷದ ಜಿಲ್ಲಾ ಘಟಕದ ಆಶ್ರಯದಲ್ಲಿ ಕಾನ್ಶಿರಾಂ ಅವರ 14ನೇ ಮಹಾಪರಿನಿಬ್ಬಾಣ ದಿವಸ್ ಹಾಗೂ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಬಡ ಮತ್ತು ಅಶಕ್ತರಿಗಾಗಿ ಅವರು ಹಲವು ಯೋಜನೆಗಳನ್ನು ರೂಪಿಸಿದರು. ರಾಜಕೀಯ ಅಧಿಕಾರಕ್ಕಾಗಿ ಹಲವು ಚಳವಳಿಗಳನ್ನು ರೂಪಿಸುವ ಮೂಲಕ ಕೋಮುವಾದಿಗಳ ಎದೆಯಲ್ಲಿ ಭೀತಿ ಹುಟ್ಟಿಸಿದ್ದರು. ಅಂತಹ ವ್ಯಕ್ತಿ, ಬಾಬಾಸಾಹೇಬರ ಹಾದಿಯಲ್ಲಿ ಹೆಜ್ಜೆ ಇಟ್ಟದ್ದು ಇಂದು ನಮಗೆ ಆನೆ ಬಲ ಬಂದಂತಾಗಿದೆ’ ಎಂದರು.
ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕೊಡ್ಲಿ ಮಾತನಾಡಿ, ‘ರಾಜ್ಯದಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರ ಏಳಿಗೆಗಾಗಿ ಪಕ್ಷ ತಳಮಟ್ಟದಿಂದ ಕೆಲಸ ಮಾಡುತ್ತಿದೆ. ಹಾಲಿ ಪರಿಷತ್ ಚುನಾವಣೆಗಳಲ್ಲಿ ದಲಿತ ಮತ್ತು ಅಲ್ಪಸಂಖ್ಯಾತರ ಶಿಕ್ಷಕರು, ಉಪನ್ಯಾಸಕರು ಮುಂದಾಲೋಚನೆ ಮಾಡಿ ಯಾರು ನಮಗೆ ಹಿತವರು ಅವರಿಗೆ ಮತ ಹಾಕುವ ನಿಟ್ಟಿನಲ್ಲಿ ಯೋಜಿಸಲಾಗುತ್ತಿದೆ’ ಎಂದರು.
ಲೋಕಸಭಾ ಕ್ಷೇತ್ರದ ಸಂಯೋಜಕ ಕೆ.ಪ್ರಕಾಶ, ಸಹ ಸಂಯೋಜಕ ರಾಮಚಂದ್ರ ಜಂಡೆ, ಪ್ರಕಾಶ ಸಾಗರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೈಲಾರಿ ಶೆಳ್ಳಗಿ, ಅಸ್ಲಾಂ ಪಟೇಲ್ ಕೊಳ್ಳೂರು ಮತ್ತು ಜಯವರ್ಧನ ಮರಪಳ್ಳಿ ಇದ್ದರು.
ಈ ವೇಳೆಯಲ್ಲಿ ಬಿಜೆಪಿ ತೊರೆದು ಅನೇಕರು ಬಿಎಸ್ಪಿಯನ್ನು ಸೇರ್ಪಡೆಯಾದರು. ಶರಣು ಹಂಗರಗಿ ನಿರೂಪಣೆ, ಮೈಲಾರಿ ಶೆಳ್ಳಗಿ ಸ್ವಾಗತಿಸಿದರು. ಪ್ರಕಾಶ ಸಾಗರ ವಂದಿರು.