ಸೇಡಂ (ಕಲಬುರ್ಗಿ ಜಿಲ್ಲೆ): ಕೇಂದ್ರ ಸರ್ಕಾರ ರೈತರ ಹಿತ ಕಾಯುವ ಬದಲು ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಅಂಬಾನಿ, ಅದಾನಿ ಪರ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಾ.ಶರಣ ಪ್ರಕಾಶ ಪಾಟೀಲ ಆರೋಪಿಸಿದರು.
ಸೇಡಂನಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷ ಆಯೋಜಿಸಿದ್ಧ ಕಿಸಾನ್ ಮಜದೂರ್ ದಿನಾಚರಣೆ ಪಾದಯಾತ್ರೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಕಾರ್ಮಿಕ ವಿರೋಧಿ ನೀತಿ, ರೈತ ವಿರೋಧಿಯನ್ನು ರಾಜ್ಯದಲ್ಲಿ ಜಾರಿಗೆ ತರುವ ಮೂಲಕ ರೈತರನ್ನು ಮತ್ತು ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ. ಇದರಿಂದ ದೇಶದ ರೈತರಿಗೆ ಮುಂದಿನ ದಿನಗಲ್ಲಿ ಬಹುದೊಡ್ಡ ಪೆಟ್ಟು ಬೀಳಲಿದ್ದು ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸುತ್ತದೆ ಎಂದರು.
ಸೇಡಂನ ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ ಪಾದಯಾತ್ರೆ ಆರಂಭಿಸಿ ಊಡಗಿ ಕ್ರಾಸ್, ಕಲಬುರ್ಗಿ ಕ್ರಾಸ್, ಬಸ್ ನಿಲ್ದಾಣ, ಮುಖ್ಯರಸ್ತೆ ಮಾರ್ಗದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ನಡೆಯಿತು.
ಪಾದಯಾತ್ರೆಯಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿ ಪ್ರತಿಭಟಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ, ವಿಶ್ವನಾಥ ಪಾಟೀಲ ಬೊಮ್ಮನಳ್ಳಿ, ರಾಜಶೇಖರ ಪುರಾಣಿಕ್, ಅನಂತಯ್ಯ ಮುಸ್ತಾಜರ್, ಅಬ್ದುಲ್ ಗಫೂರ್, ಸಂತೋಷ ತಳವಾರ, ಸತೀಶರೆಡ್ಡಿ ರಂಜೋಳ, ರುದ್ರು ಪಿಲ್ಲಿ ವೆಂಕಟಪ್ಪ ಸೇರಿದಂತೆ ಅನೇಕರಿದ್ದರು.