ಪೊಲೀಸರಿಗೆ ಮಾಹಿತಿ ನೀಡಿದರೆ ಮಗುವನ್ನು ಜೀವಂತವಾಗಿ ಬಿಡುವುದಿಲ್ಲ ಎಂದೂ ಬೆದರಿಕೆ ಹಾಕಿದ್ದರು. ಆದರೂ, ಬೆದರಿಕೆಗೆ ಬಗ್ಗದ ಗುರುನಾಥ ವಿಶ್ವವಿದ್ಯಾಲಯ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿ.ವಿ. ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಅರುಣ ಮುರಗುಂಡಿ ನೇತೃತ್ವದ ತಂಡವು ಸಾದಾ ಬಟ್ಟೆ ಧರಿಸಿಕೊಂಡು ಖಾಸಗಿ ವಾಹನಗಳಲ್ಲಿ ನಗರದ ಸುತ್ತಮುತ್ತ ಗಸ್ತು ಆರಂಭಿಸಿದ್ದರು. ಇತ್ತ ಗುರುನಾಥ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದು, ಹಣವನ್ನು ಎಲ್ಲಿಗೆ ಮುಟ್ಟಿಸಬೇಕು ಎಂದು ಹೇಳಿದ್ದರು. ಕಲಬುರಗಿ ತಾಲ್ಲೂಕಿನ ಪಾಳಾ ಬಳಿಯಿರುವ ಶಾಲೆಯೊಂದರಲ್ಲಿ ಹಣ ಇಟ್ಟು ಹೋಗಿ ಎಂದಿದ್ದರು. ಅಷ್ಟರೊಳಗಾಗಿ ಪೊಲೀಸರು ತಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂಬ ಸುದ್ದಿ ತಿಳಿದ ಅಪಹರಣಕಾರರು, ಬಾಲಕನನ್ನು ಬಿಟ್ಟು ಪರಾರಿಯಾಗಿದ್ದರು.