ಕಲಬುರಗಿ: ‘ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಲು ಎಲ್ಲ ಮಸೀದಿಗಳ ಮೇಲಿನ ಧ್ವನಿವರ್ಧಕಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ರಾಜ್ಯದ ಎಲ್ಲ ಹಿಂದೂ ದೇವಾಲಯಗಳಲ್ಲೂ ಹನುಮಾನ್ ಚಾಲೀಸಾ ಹಾಗೂ ರಾಮನಾಮ ಜಪ ಭಜನೆಗಳನ್ನು ಧ್ವನಿವರ್ಧಕದ ಮೂಲಕ ಪ್ರಸಾರ ಮಾಡಲಾಗುವುದು’ ಎಂದು ಶ್ರೀರಾಮ ಸೇನೆ ರಾಜ್ಯ ಘಟಕದ ಅಧ್ಯಕ್ಷ ಆಂದೋಲಾ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
‘ಧ್ವನಿವರ್ಧಕಗಳ ವಿಷಯದಲ್ಲಿಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗುತ್ತಿಲ್ಲ. ಇದನ್ನು ಖಂಡಿಸಿ ಏಪ್ರಿಲ್ 13ರಂದು ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು. ನಂತರ ಮಸೀದಿ ಸಮಿತಿಗಳು ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಿಟ್ ಅರ್ಜಿ ಸಲ್ಲಿಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
‘ಮಸೀದಿಗಳ ಮೇಲಿನ ಧ್ವನಿವರ್ಧಕ ತೆರವು ಮಾಡದಿದ್ದರೆ ರಾಮನವಮಿ (ಏ.10) ದಿನದಿಂದ ಬಹುಪಾಲು ದೇವಸ್ಥಾನಗಳಲ್ಲಿ ನಾವೇ ಧ್ವನಿವರ್ಧಕ ಹಾಕಿ, ಭಜನೆ ಆರಂಭಿಸುತ್ತೇವೆ. ಕಾನೂನು ಎಲ್ಲರಿಗೂ ಒಂದೇ ಆಗಲಿ’ ಎಂದು ಹಿಂದೂ ಮಹಿಳಾ ಜಾಗೃತಿ ವೇದಿಕೆ ನಾಯಕಿ ದಿವ್ಯಾ ಹಾಗರಗಿ ಹೇಳಿದರು.