ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ: ಮನೆಯಲ್ಲಿ ಮಹಾಮನೆ ಕಾರ್ಯಕ್ರಮ

Last Updated 3 ಜನವರಿ 2022, 4:52 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಸೇಡಂ: ‘12ನೇ ಶತಮಾನದಲ್ಲಿ ಶರಣರು ರಚಿಸಿದ ವಚನಗಳು ಮಾನವ ಸಂಕುಲದ ಏಳಿಗೆಯನ್ನು ಬಯಸಿವೆ. ವಚನಗಳನ್ನು ಸರಿಯಾಗಿ ಓದಿ ಅರ್ಥಮಾಡಿಕೊಂಡವರು, ಆತ್ಮಹತ್ಯೆಗೆ ಶರಣಾಗುವುದಿಲ್ಲ. ಮಾದರಿ ಜೀವನ ನಡೆಸಿ ಉನ್ನತ ಸಾಧನೆ ಮಾಡುತ್ತಾರೆ’ ಎಂದು ನಿವೃತ್ತ ಪ್ರಾಚಾರ್ಯ ನೀಲಮ್ಮ ಕತ್ನಳ್ಳಿ ಅಭಿಪ್ರಾಯಪಟ್ಟರು.

ಪಟ್ಟಣದ ಚಂದ್ರಶೆಟ್ಟಿ ಬಂಗಾರ ಅವರ ಮನೆಯಲ್ಲಿ ತಾಲೂಕಾ ಬಸವ ಕೇಂದ್ರ ಶನಿವಾರ ಆಯೋಜಿಸಿದ್ದ 101ನೇ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶರಣರು ಜಾತ್ಯಾತೀತ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿದರು. ಕಾಯಕ, ದಾಸೋಹಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದರು. ಹೆಣ್ಣು-ಗಂಡು ಎನ್ನದೆ ಸಮಾನತೆಯ ಸ್ಥಾನವನ್ನು ನೀಡಿದ್ದರು. ಸ್ವಾತಂತ್ರ್ಯವನ್ನು ಮಹಿಳೆಯರು ಸಮಪರ್ಕವಾಗಿ ಬಳಸಿಕೊಂಡು, ಸಾರ್ಥಕ ಜೀವನ ರೂಪಿಸಿಕೊಳ್ಳಬೇಕಿದೆ’ ಎಂದರು.

ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಬಸವಾದಿ ಶರಣರು ವೈಚಾರಿಕ ಕ್ರಾಂತಿಕ ಸಾರ್ವಕಾಲಿಕ. ಅದು ಎಂದೆಂದಿಗೂ ಸತ್ಯವಾದುವುಗಳು. ನುಡಿದಂತೆ ನಡೆದ ಶರಣಚು ಮನುಕಲಕ್ಕೆ ಸಂದೇಶವನ್ನು ನೀಡಿದ್ದಾರೆ. ವಚನ ಕೇವಲ ಓದುವುದರಿಂದ ಮಹತ್ವ ಪಡೆಯುವುದಿಲ್ಲ. ಅವುಗಳ ಅರ್ಥಮಾಡಿಕೊಂಡು, ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳುವ ಮೂಲಕ ಅವುಗಳ ಮಹತ್ವವನ್ನು ಹೆಚ್ಚಿಸಬೇಕಿದೆ’ ಎಂದು ತಿಳಿಸಿದರು.

ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ತೊಟ್ನಳ್ಳಿ ಮಹಾಂತೇಶ್ವರ ಮಠದ ಡಾ.ತ್ರಿಮೂರ್ತಿ ಶಿವಾಚಾರ್ಯ, ಹಾಲಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಮಂಗಲಗಿ ಡಾ.ಶಾಂತಸೋಮನಾಥ ಶಿವಾಚಾರ್ಯ, ಚನ್ನಮ್ಮ ಪಾಟೀಲ, ಶರಣುಕುಮಾರ ಮೋದಿ, ಮುರಿಗೆಪ್ಪ ಕೋಳ್ಕುರ, ಚಂದ್ರಶೆಟ್ಟಿ ಬಂಗಾರ, ಜಗದೀಶ ಕಡಬಗಾಂವ ಇದ್ದರು.
ಮಹಿಳಾ ಸಾಧಕರಿಗೆ ಸತ್ಕಾರ:
101ನೇ ಮನೆಯಲ್ಲಿ ಮಹಾಮನೆಯ ಕಾರ್ಯಕ್ರಮದಲ್ಲಿ 10 ಜನ ಮಹಿಳಾ ಸಾಧಕರನ್ನು ವಿಶೇಷವಾಗಿ ಸತ್ಕರಿಸಿ, ಅವರಿಗೆ ಸ್ಮರಣಿಕೆಯನ್ನು ನೀಡಲಾಯಿತು. ಕಲಾವತಿ ಅಕ್ಕ (ಆಧ್ಯಾತ್ಮಿಕ), ಡಾ.ಗೀತಾ ಶ್ರೀನಿವಾಸರೆಡ್ಡಿ ಪಾಟೀಲ ಕೋಲ್ಕುಂದಾ
(ವೈದ್ಯಕೀಯ), ಶೋಭಾದೇವಿ
ಚೆಕ್ಕಿ(ಸಾಹಿತ್ಯ), ಅಕ್ಕನಾಗಮ್ಮ ಆಡಕಿ(ಶಿಕ್ಷಣ), ಆರತಿ ಕಡಗಂಚಿ(ಸಾಹಿತ್ಯ), ರುಕ್ಮಿಣಿ ಕಾಳಗಿ(ಸಾಮಾಜಿಕ), ಅಂಜನಾ ಭೋವಿ(ಸಂಗೀತ), ಪುಣ್ಯಮಗೌಡತಿ(ದಾನಿ), ಶಾಂತಾಬಾಯಿ ಮೀನಹಾಬಾಳ(ಸಾಮಾಜಿಕ) ಮತ್ತು ಚನ್ನಮ್ಮ ಮಠಪತಿ(ಸಾಮಾಜಿಕ) ರವನ್ನು
ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT