ಕಲಬುರ್ಗಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ಯಾನಗಳಲ್ಲಿ ಸುಮಾರು 5 ಸಾವಿರ ಸಸಿಗಳನ್ನು ನೆಡುವಂತೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರಿಗೆ ಸೂಚನೆ ನೀಡಿದರು.
ಬುಧವಾರ ಬೆಳಿಗ್ಗೆ ನಗರದ ಶರಣಬಸವೇಶ್ವರ ದೇವಸ್ಥಾನ, ವಿದ್ಯಾನಗರ, ಎಸ್ ವಿಪಿ ಸರ್ಕಲ್, ಜಗತ್ ಸರ್ಕಲ್, ಸ್ವಸ್ತಿಕ್ ನಗರದಲ್ಲಿ ಸಂಚಾರ ನಡೆಸಿದ ಅವರು ಸ್ವಚ್ಛತಾ ಕಾರ್ಯವನ್ನು ವೀಕ್ಷಿಸಿದರು.
ನಗರವನ್ನು ಸ್ವಚ್ಛವಾಗಿಡಬೇಕು. ಉದ್ಯಾನವನಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರ ಯೋಗಕ್ಷೇಮವನ್ನು ವಿಚಾರಿಸಿದರು.
ಸಚಿವರು ಬರುತ್ತಿರುವುದರಿಂದ ಪಾಲಿಕೆ ಪೌರಕಾರ್ಮಿಕರಿಗೆ ಹೊಸ ಗಮ್ ಬೂಟ್, ಕೈಗವಸು, ಜಾಕೆಟ್, ಮಾಸ್ಕ್ ಗಳನ್ನು ಒದಗಿಸಿತ್ತು.
ನಂತರ ಜೇವರ್ಗಿ ರಸ್ತೆಯಲ್ಲಿರುವ ನಂದಿಕೂರ ಗ್ರಾಮದಲ್ಲಿರುವ ಕೊಳಚೆ ನೀರು ಶುದ್ಧೀಕರಣ ಘಟಕವನ್ನು ವೀಕ್ಷಿಸಿದರು.
ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಪಾಲಿಕೆಯ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.