ಕಲಬುರಗಿ: ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಮುಂಗಾರು ಮಳೆ ವಿಫಲವಾಗಿ ರೈತರು ಕಂಗಾಲಾಗಿದ್ದಾರೆ. ತೋಟಗಾರಿಕೆ ಬೆಳೆ ಕೂಡಾ ನೀರಿಲ್ಲದೆ ಹಾಳಾಗಿವೆ. ಈ ಹಾಳಾದ ಬೆಳೆಗಳಿಗೆ ತಕ್ಷಣ ಸರ್ವೆ ಮಾಡಿ ಪರಿಹಾರ ನೀಡಬೇಕು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಸದನದಲ್ಲಿ ಮಂಗಳವಾರ ಅಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಗಮನ ಸೆಳೆಯುವ ಗೊತ್ತುವಳಿ ಮೇಲೆ ಮಾತನಾಡಿದ ಅವರು, ಕಳೆದ ಒಂದೂವರೆ ತಿಂಗಳಿಂದ ಸಮರ್ಪಕವಾಗಿ ಮಳೆ ಆಗಿಲ್ಲ. ಇದು ಇಡೀ ಪ್ರದೇಶದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ತಂದೊಡ್ಡಿದೆ ಎಂದು ಕಳವಳ ಹೊರ ಹಾಕಿದರು.
ಈಗ ಮಳೆ ಸುರಿದರೂ ಮುಂಗಾರು ಫಸಲು ಬಿತ್ತನೆ ಅಸಾಧ್ಯ. ಮುಂಗಾರು ವೈಫಲ್ಯ ರೈತರನ್ನು ಸಾವಿನ ಮನೆಗೆ ಒಯ್ಯುತ್ತಿದೆ. ಕಳೆದ 2 ತಿಂಗಲ್ಲಿಯೇ ರಾಜ್ಯದಲ್ಲಿ 45 ರೈತರ ಆತ್ಮಹತ್ಯೆ ಸಂಭವಿಸಿವೆ. ಈ ಪೈಕಿ ಕಲ್ಯಾಣದ ಜಿಲ್ಲೆಗಳಲ್ಲಿ 15ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ನಮ್ಮ ರೈತರು ಎದುರಿಸುತ್ತಿರುವ ಗಂಭೀರ ಪರಿಸ್ಥಿತಿಗೆ ಕನ್ನಡಿ ಎಂದರು.
ಮುಂಗಾರು ವೈಫಲ್ಯ, ಬೆಳೆ ಹಾನಿ ಹಾಗೂ ಕಾಡು ಹಂದಿ ಕಾಟದಿಂದ ಬೆಳೆ ಹಾನಿಯ ಇಂತಹ ಪ್ರಕರಣಗಳನ್ನು ಸರ್ಕಾರ ಪರಿಹಾರಕ್ಕೆ ಧಾವಿಸಬೇಕು ಎಂದು ಅಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಮಳೆ ಹಾನಿ, ಬರಗಾಲ ಸ್ಥಿತಿ, ರೈತರ ಗೋಳು ಇತ್ಯಾದಿ ಸಂಗತಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ. ಬರಗಾಲ ವಿಚಾರದಲ್ಲಿ ಸಂಪುಟ ಉಪ ಸಮಿತಿ ಸಭೆ ನಡೆಸಿ ಕಲವು ತೀರ್ಮಾನಗಳನ್ನು ಕೈಗೊಳ್ಳುತ್ತೇವೆ ಎಂದರು.