ಕಲಬುರಗಿ: ‘ಕಲಬುರಗಿಯನ್ನು ಸ್ವಚ್ಛ ನಗರ ಮಾಡುವಲ್ಲಿ ಅಧಿಕಾರಿಗಳು ಶ್ರಮವಹಿಸಬೇಕು. ಅಗತ್ಯವಿದ್ದ ಕಡೆಗೆ ಹೆಚ್ಚಿನ ಪೌರಕಾರ್ಮಿಕರನ್ನು ನಿಯೋಜಿಸಿಕೊಂಡು ಕೆಲಸ ಮಾಡಿಸಬೇಕು. ಮಾಲಿನ್ಯ ಕಂಡುಬರದಂತೆ ನಿರಂತರ ಎಚ್ಚರಿಕೆ ವಹಿಸಬೇಕು’ ಎಂದುಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಸೂಚನೆ ನೀಡಿದರು.
ನಗರದ 35ನೇ ವಾರ್ಡಿಗೆ ಶನಿವಾರ ಭೇಟಿ ನೀಡಿದ ಅವರು ಜನರ ಸಮಸ್ಯೆಗಳನ್ನು ಆಲಿಸಿದರು.ಈ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಮಕ್ತಂಪುರ, ಹೋಳಿಕಟ್ಟ, ಚಕ್ರಕಟ್ಟ, ಗಾಜಿಪುರ, ಸಿದ್ಧೇಶ್ವರ ಕಾಲೊನಿ, ಗದ್ದುಗೆಮಠ, ಗಣೇಶ ಮಂದಿರ ಪ್ರದೇಶ ಸೇರಿದಂತೆ ವಿವಿಧೆಡೆ ಸಂಚರಿಸಿದರು.
ಎಲ್ಲೆಂದರಲ್ಲಿ ಕಟ್ಟಿಕೊಂಡಚರಂಡಿ, ರಸ್ತೆ ಪಕ್ಕದಲ್ಲೇ ಬಿದ್ದ ಕಸದ ಗುಡ್ಡೆ, ಮಲಿನ ವಾತಾವರಣ ಕಂಡು ಶಾಸಕರು ಗರಂ ಆದರು. ಜನರ ಕೆಲಸ ಮಾಡುವುದಕ್ಕಾಗಿಯೇ ಇರುವ ಅಧಿಕಾರಿಗಳು ಬೇಜವಾಬ್ದಾರಿ ತೋರಕೂಡದು. ಪ್ರತಿ ದಿನ ತ್ಯಾಜ್ಯ ವಿಲೇವಾರಿಗೆ ಗಮನ ಕೊಡಬೇಕು ಎಂದು ಸೂಚಿಸಿದರು.
ಪಾಲಿಕೆ ಸದಸ್ಯ ವಿಜಯಕುಮಾರ ಸೇವಲಾನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್, ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ ಇದ್ದರು. ಪಾಲಿಕೆಯ ಉಪ ಆಯುಕ್ತ ಆರ್.ಪಿ.ಜಾಧವ, ಎಂಜಿನಿಯರ್ ಕೆ.ಎಸ್.ಪಾಟೀಲ, ಜೆಸ್ಕಾಂ, ನಗರ ನೀರು ಸರಬರಾಜು ಮತ್ತು ಒಳಚತಂಡಿ ಮಂಡಳಿ ಅಧಿಕಾರಿಗಳೂ ಇದ್ದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು, ರಸ್ತೆ ದುರಸ್ತಿ ಮಾಡಬೇಕು. ಚರಂಡಿಗಳು ಕಟ್ಟಿಕೊಂಡಿದ್ದರಿಂದ ಪರಿಸರ ಮಾಲಿನ್ಯ ಉಂಟಾಗಿದ್ದು, ಇದನ್ನು ಸ್ವಚ್ಛಗೊಳಿಸಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಜನ ಶಾಸಕರಿಗೆ ಸಲ್ಲಿಸಿದರು.