ಜೇವರ್ಗಿ: ಭೀಮಾ ನದಿ ದಡದಲ್ಲಿರುವ ತಾಲ್ಲೂಕಿನ ಹಲವು ಗ್ರಾಮಗಳಿಗೆ ಶಾಸಕ ಅಜಯಸಿಂಗ್ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿದರು.
ನೆಲೋಗಿ ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಯ ಮಾಹೂರ, ಕೂಡ್ಲಿಗಿ, ಬಳ್ಳುಂಡಗಿ, ರಾಸಣಗಿ, ಹರವಾಳ, ಬಣಮಿ, ಕೋನಾಹಿಪ್ಪರಗಿ, ಕೋಬಾಳ, ಹಂದನೂರ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿ, ಸರ್ಕಾರದಿಂದ ಸೂಕ್ತ ಪರಿಹಾರದ ಭರವಸೆ ಒದಗಿಸುವ ಭರವಸೆ ನೀಡಿದರು.
ನಂತರ ಮಾತನಾಡಿದ ಅವರು, ಭೀಮಾನದಿಗೆ ಮಹಾರಾಷ್ಟ್ರದಿಂದ ಹೆಚ್ಚಿನ ನೀರು ಹರಿಸಿದ್ದರಿಂದ ರದ್ದೇವಾಡಗಿ, ಮಾಹೂರ, ಮಂದ್ರವಾಡ, ಕೋಬಾಳ ಗ್ರಾಮಗಳು ಸೇರಿದಂತೆ 30 ಹಳ್ಳಿಗಳು ಜಲಾವೃತಗೊಂಡಿದ್ದರಿಂದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ತಾಲ್ಲೂಕಿನಲ್ಲಿ ಅಂದಾಜು 400 ಹೆಕ್ಟೇರ್ ತೋಟಗಾರಿಕೆ ಮತ್ತು 80 ಸಾವಿರ ಹೆಕ್ಟೇರ್ ಕೃಷಿ ಬೆಳೆಗಳು ಹಾನಿಯಾಗಿವೆ. 800ಕ್ಕೂ ಅಧಿಕ ಮನೆಗಳು ಕುಸಿದಿವೆ. ಹೆಚ್ಚಿನ ಸಂಖ್ಯೆಯಲ್ಲಿ ನಿರಾಶ್ರಿತ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.