ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಗಡಿಕೇಶ್ವಾರ, ತೇಗಲತಿಪ್ಪಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ತಡರಾತ್ರಿ ಮತ್ತೆ ಲಘು ಭೂಕಂಪದ ಅನುಭವವಾಗಿದೆ.
ರಾತ್ರಿ 1 ಗಂಟೆಯ ಸಮಯದಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು, ಜನರು ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದರು.
ಗಡಿಕೇಶ್ವಾರ ಗ್ರಾಮದಲ್ಲಿ ಪದೇಪದೇ ಭೂಮಿಯಿಂದ ಭಾರಿ ಪ್ರಮಾಣದ ಸ್ಫೋಟಕ ಸದ್ದು ಕೇಳಿಬರುವುದು ಸಾಮಾನ್ಯವಾಗಿದೆ. ಈ ಸದ್ದು ಪದೇಪದೇ ಜನರ ನಿದ್ದೆಗೆಡಿಸುತ್ತಿದೆ. ಇದರೊಂದಿಗೆ ಈಗ ಭೂಮಿ ಕಂಪಿಸಿದ್ದಕ್ಕೆ ಜನ ಭಯಭೀತರಾದರು. ಹಲವರು ಮನೆಯ ಹೊರಗೆ ಮಲಗಿ ರಾತ್ರಿ ಕಳೆದರು.
ತಿಂಗಳ ಹಿಂದೆ ಕೂಡ ತೆಲಂಗಾಣ ಗಡಿಯಲ್ಲಿ ಸಂಭವಿಸಿದ ಭೂಕಂಪದ ಕಾರಣ ಕಲಬುರಗಿ ಜಿಲ್ಲೆಯ ಚಿಂಚೋಳಿ, ಕಾಳಗಿ, ಚಿತ್ತಾಪುರ, ಸೇಡಂ ತಾಲ್ಲೂಕುಗಳಲ್ಲಿಯೂ ಭೂಮಿ ಅಲುಗಾಡಿತ್ತು