ಚಿಂಚೋಳಿ (ಕಲಬುರಗಿ ಜಿಲ್ಲೆ): ಅಸ್ಸಾಂ ರಾಜ್ಯದ ಮಹಿಳೆಯ ಜತೆಗೆ ಅನೈತಿಕ ಸಂಬಂಧ ಬೆಳೆಸಿದ್ದ ಬಿಹಾರ ರಾಜ್ಯದ ಯುವಕ ಮಹಿಳೆಯನ್ನು ಕೊಲೆ ಮಾಡಿದ ಘಟನೆಯನ್ನು ಚಿಂಚೋಳಿ ಠಾಣೆ ಪೊಲೀಸರು ಭೇದಿಸಿದ್ದಾರೆ.
ಜಸ್ಮಿಕಾ ಕಾತುನ್ ನಜ್ಮೊದ್ದೀನ್ (30) ಕೊಲೆಯಾದ ನತದೃಷ್ಟೆ. ಇವಳನ್ನು ಮಹಮದ್ ಜುಲ್ಫಿಕರ್ ಆಲಂ ಅಲಿಯಾಸ್ ಅಸ್ಲಾಂ ಮಹಮದ್ ಅಲಿಮೋದ್ದಿನ್ (29) ಕೊಲೆ ಮಾಡಿ ಪರಾರಿಯಾಗಿದ್ದ. ಆತನನ್ನು ಚಿಂಚೋಳಿ ಪೊಲೀಸರು ಪತ್ತೆ ಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ತಿಳಿಸಿದರು.
2021ರ ಏಪ್ರಿಲ್ 4ರಂದು ಚಿಂಚೋಳಿ ತಾಲ್ಲೂಕಿನ ಪೋಲಕಪಳ್ಳಿ ಬಳಿಯ ದಿ ಮೆಟ್ರಿಕ್ಸ್ ವಿದ್ಯುತ್ ತಯಾರಿಕಾ ಘಟಕದ ಬಳಿ ಮಹಿಳೆಯನ್ನು ದುಪ್ಪಟ್ಟಾದಿಂದಲೇ ಕುತ್ತಿಗೆಗೆ ಸುತ್ತಿ, ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಿ ಪರಾರಿಯಾಗಿದ್ದ. ತನಿಖೆ ಕೈಗೆತ್ತಿಕೊಂಡ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಮಹಾಂತೇಶ ಪಾಟೀಲ ಅವರು ವೈಜ್ಞಾನಿಕ ವಿಧಾನ ಅನುಸರಿಸಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಡಿವೈಎಸ್ಪಿ ಕೆ. ಬಸವರಾಜ, ಮಹಾಂತೇಶ ಪಾಟೀಲ, ಶಫಿಯೋದ್ದಿನ್, ಈಶ್ವರ್, ಶಿವಾನಂದ, ಅಂಬಾರಾಯ ಮೊದಲಾದವರು ಇದ್ದರು.