ಕಲಬುರ್ಗಿ: ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ 52 ಮಂದಿಯ ವಿರುದ್ಧ 22 ಪ್ರಕರಣಗಳನ್ನು ದಾಖಲಿಸಲಾಗಿದೆ. ಇವರಲ್ಲಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.
ಬಂಧಿತ ಏಳೂ ಜನರ ವಿರುದ್ಧ ವಾಹನ ಜಖಂಗೊಳಿಸಿದ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಇನ್ನೊಬ್ಬರು ತಲೆಮರೆಸಿಕೊಂಡಿದ್ದಾರೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ 36 ಮಂದಿ, ಕೆಸ್ಮಾ ಕಾಯ್ದೆ ಅಡಿ 7, ವಾಟ್ಸ್ಆ್ಯಪ್ ಮೂಲಕ ಪ್ರಚೋದನೆ ನೀಡಿದ ಒಬ್ಬರ ವಿರುದ್ಧ ವಿವಿಧ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡುವ ಉದ್ದೇಶದಿಂದ 135 ಸಿಬ್ಬಂದಿಯನ್ನು ಬೇರೆಬೇರೆ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ. ಸಂಸ್ಥೆ ವ್ಯಾಪ್ತಿಗೆ ಬರುವ 9 ವಿಭಾಗಗಳು ಸೇರಿ ಈವರೆಗೆ 55 ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.
ಇದರ ಮಧ್ಯೆ, ಶುಕ್ರವಾರ ಮತ್ತಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದು, 1,014 ಬಸ್ ಓಡಿಸಲಾಗಿದೆ. 323 ಖಾಸಗಿ ವಾಹನ, 179 ನೆರೆ ರಾಜ್ಯಗಳ ಸರ್ಕಾರಿ ಬಸ್ ಹಾಗೂ 2,094 ಇತರೆ ವಾಹನಗಳನ್ನು ಪ್ರಯಾಣಿಕರಿಗಾಗಿ ಓಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.