ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಪಟ್ಟಣದ ಬೀಜೋತ್ಪಾದನಾ ಕೇಂದ್ರದಲ್ಲಿರುವ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಉಗ್ರಾಣಕ್ಕೆ ಮಳೆ ಮತ್ತು ಪ್ರವಾಹದ ನೀರು ನುಗ್ಗಿದ್ದು, ಅಲ್ಲಿ ದಾಸ್ತಾನು ಮಾಡಲಾಗಿದ್ದ ಕೆಂಪು ಮತ್ತು ಬಿಳಿ ತೊಗರಿ ಹಾಳಾಗಿದೆ.
ಭಾರಿ ಮಳೆ ಜೊತೆಗೆ ನಾಗರಾಳ ಮತ್ತು ಚಂದ್ರಂಪಳ್ಳಿ ಜಲಾಶಯಗಳಿಂದ ನದಿಗೆ ಬಿಡಲಾಗಿರುವ ಹೆಚ್ಚುವರಿ ಪ್ರವಾಹದ ನೀರು ನುಗ್ಗಿದೆ. ರೈತರಿಂದ ಬೆಂಬಲ ಬೆಲೆಗೆ ಖರೀದಿಸಿ ಉಗ್ರಾಣದಲ್ಲಿ ದಾಸ್ತಾನು ಮಾಡಲಾಗಿದ್ದ 50 ಕೆಜಿ ಗಾತ್ರದ 8000 ಕೆಂಪು ಮತ್ತು ಬಿಳಿ ತೊಗರಿ ಚೀಲಗಳಿಗೆ ಹಾನಿಯಾಗಿದೆ.
ಒಟ್ಟಾರೆ 4 ಸಾವಿರ ಕ್ವಿಂಟಲ್ ತೊಗರಿ ಹಾಳಾಗಿದ್ದು, ₹ 2.50 ಕೋಟಿ ನಷ್ಟ ಉಂಟಾಗಿದೆ. ನಫೇಡ್ ಪ್ರಾದೇಶಿಕ ವ್ಯವಸ್ಥಾಪಕರು ಮತ್ತು ಚಿಂಚೋಳಿ ಠಾಣೆಯ ಎಸ್ಐ ರಾಜಶೇಖರ ರಾಠೋಡ ಶುಕ್ರವಾರ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು.