ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಮೀರಿದರೆ ಕಠಿಣ ಕ್ರಮ: ಸುರೇಶ ವರ್ಮಾ

Last Updated 8 ಸೆಪ್ಟೆಂಬರ್ 2021, 3:22 IST
ಅಕ್ಷರ ಗಾತ್ರ

ಶಹಾಬಾದ್: ಗಣೇಶ ಉತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದ್ದು, ನಿಯಮ ಉಲ್ಲಂಘಿಸಿ ಆಚರಣೆ ಮಾಡಿದವರು ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಹಶೀಲ್ದಾರ್ ಸುರೇಶ ವರ್ಮಾ ಹೇಳಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿಮಂಗಳವಾರ ನಡೆದ ಗಣೇಶ ಚತುರ್ಥಿಯ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಗಣೇಶ ಮೂರ್ತಿ ಮೆರವಣಿಗೆ, ಪಟಾಕಿ ಹಚ್ಚುವುದು, ಗುಲಾಲು ಎರೆಚುವುದು ಹಾಗೂ ಡಿಜೆ ನಿಷೇಧಿಸಲಾಗಿದೆ. ಹಬ್ಬವನ್ನು ಕೋವಿಡ್ ನಿಯಮಗಳಿವೆ ಅನುಸಾರವಾಗಿ ಆಚರಿಸಬೇಕು. ಹಬ್ಬ ಮತ್ತು ಉತ್ಸವಗಳು ಬದುಕಿಗೆ ಮಾರಕವಾಗಬಾರದು ಎಂದರು.

ಈ ಬಾರಿ ಗಣೇಶ ಹಬ್ಬದಲ್ಲಿ 4 ಅಡಿಗಿಂತ ಹೆಚ್ಚಿನ ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವಂತಿಲ್ಲ. ಪರಿಸರಸ್ನೇಹಿ ಮೂರ್ತಿ ಗಳಿಗೆ ವಿನಾಯಿತಿ ನೀಡಿ ಲಾಗಿದೆ. ಗಣೇಶನ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವಾಗ ಮೆರವಣಿಗೆ ಮಾಡುವಂತಿಲ್ಲ. ಮೂರ್ತಿ ಕೂಡಿಸಲುಐದು ದಿನಗಳಿಗೆ ಮಾತ್ರ ಅವಕಾಶವಿದೆ. ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಪ್ರತಿಷ್ಠಾಪನೆ ಮಾಡಬೇಕು ಎಂದರು.

ಡಿವೈಎಸ್‍ಪಿ ಉಮೇಶ ಚಿಕ್ಕಮಠ ಮಾತನಾಡಿ, ಮೂರ್ತಿ ಪ್ರತಿಷ್ಠಾಪನೆಗೆ ತಾಲ್ಲೂಕು ಆಡಳಿತ, ನಗರಸಭೆ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು. ಯಾವುದೇ ಕಾರಣಕ್ಕೂ ಸರ್ಕಾರದ ಆದೇಶ ಉಲ್ಲಂಘಿಸಬಾರದು ಎಂದರು.

ಪೌರಾಯುಕ್ತ ಕೆ.ಗುರಲಿಂಗಪ್ಪ ಮಾತನಾಡಿ, ಮಾರ್ಗಸೂಚಿಗಳನ್ನು ಅರಿತು ಹಬ್ಬವನ್ನು ಆದಷ್ಟು ಸರಳವಾಗಿ ಆಚರಿಸಿ. ಜನಸಂದಣಿ ಆಗದಂತೆ ನೋಡಿ, ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಹೇಳಿದರು.

ಪಿಐ ಸಂತೋಷ ಹಳ್ಳೂರ್ ಮಾತನಾಡಿ, ರಸ್ತೆಗಳಲ್ಲಿ ನಿಂತು ವಾಹನಗಳನ್ನು ತಡೆದು ಚಂದಾ ವಸೂಲಿ ಮಾಡುವಂತಿಲ್ಲ. ಮುಕ್ತವಾಗಿ ಹಬ್ಬಗಳನ್ನು ಆಚರಿಸಿದರೇ ಮಾತ್ರ ಕೋಮು ಸೌಹಾರ್ದತೆಗೆ ಅರ್ಥ ಬರುತ್ತದೆ. ಅನ್ಯರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಆಚರಣೆ ಮಾಡಬಾರದು ಎಂದು ಹೇಳಿದರು.

ಪ್ರೋಬೆಷನರಿ ಡಿವೈಎಸ್‍ಪಿ ವೀರಯ್ಯ ಹಿರೇಮಠ, ಪಿಎಸ್‍ಐಗಳಾದ ಚೇತನ, ಗಂಗಮ್ಮ, ಚೈತ್ರ, ಅರುಣ ಪಟ್ಟಣಕರ್, ಡಾ.ರಷೀದ ಮರ್ಚಂಟ್, ಕುಮಾರ ಚವ್ಹಾಣ್, ಮೃತ್ಯುಂಜಯ್ ಹಿರೇಮಠ, ನಾಗರಾಜ ಮೇಲಗಿರಿ, ಲೋಹಿತ ಕಟ್ಟಿ, ಇನಾಯತ್ ಖಾನ್ ಜಮಾದಾರ ಇದ್ದರು.

ಗಣೇಶೋತ್ಸವ: ಷರತ್ತುಬದ್ಧ ಅನುಮತಿ

ಅಫಜಲಪುರ: ‘ಗಣೇಶ ಉತ್ಸವ ಆಚರಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದು, ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು’ ಎಂದು ಸಿಪಿಐ ಜಗದೇವಪ್ಪ ಪಾಳಾ ತಿಳಿಸಿದರು.

ಇಲ್ಲಿನ ಪೋಲಿಸ್ ಠಾಣೆಯಲ್ಲಿ ಮಂಗಳವಾರ ನಡೆದ ಗಣೇಶ ಉತ್ಸವ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಉತ್ಸವಗಳು ಪ್ರತಿ ವರ್ಷ ಬರುತ್ತವೆ. ಒಮ್ಮೆ ಹೋದ ಜೀವ ಮರಳಿ ಬರುವುದಿಲ್ಲ. ಪ್ರಾಣ ರಕ್ಷಣೆಗೆ ನಿಯಮ ಪಾಲನೆ ಕಡ್ಡಾಯವಾಗಿದ್ದು, ಮಾಸ್ಕ್‌ ಧರಿಸಿ ಮತ್ತು ಲಸಿಕೆ ಪಡೆದುಕೊಳ್ಳಬೇಕು. ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ ವೇಳೆ ಮೆರವಣಿಗೆ ಮಾಡುವಂತಿಲ್ಲ ಎಂದು ಹೇಳಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಮೀತಿಯವರು ಸಾಂಸ್ಕೃತಿಕ ಕಾರ್ಯಕ್ರಮಗಳ ಬದಲಿಗೆ ಕೊರೊನಾ ಜಾಗೃತಿ, ರಕ್ತದಾನ ಶಿಬಿರ, ಪ್ರವಾಹ ಸಂತ್ರಸ್ತರಿಗೆ ನೆರವು, ರೈತರನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದರೆ ಇನ್ನೂ ಉತ್ತಮ ಎಂದರು.

ಮುಸ್ಲಿಂ ಸಮಾಜದ ಮುಖಂಡ ಮಕ್‌ಬುಲ್ ಪಟೇಲ್ ಮಾತನಾಡಿ, ಹಿಂದೂ–ಮುಸ್ಲಿಮರು ಒಂದೇ ನಾಣ್ಯದ ಎರಡು ಮುಖಗಳಂತೆ ಜೀವನ ನಡೆಸುತ್ತಿದ್ದೇವೆ. ಶಾಂತಿಗೆ ಭಂಗ ತರುವುದಿಲ್ಲ. ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತೇವೆ. ಅಗತ್ಯವಾದ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಜು ಬಡದಾಳ , ಕಾಂಗ್ರೆಸ್ ಯುವ ಮುಖಂಡ ರಮೇಶ ಪೂಜಾರಿ , ಯುವ ಬ್ರಿಗೇಡ್ ಜಿಲ್ಲಾ ವಿಸ್ತಾರಕ್ಕೆ ಆನಂದ ಶೆಟ್ಟಿ ಮಾತನಾಡಿದರು.

ಶಾಂತಿ ಸಭೆಯಲ್ಲಿ ಪಿಎಸ್ಐ ವಿಶ್ವನಾಥ ಮುದರೆಡ್ಡಿ, ಶಿರಸ್ತೇದಾರ ಚಂದ್ರಶೇಖರ ಎಚ್.ಸಿ, ಪುರಸಭೆ ಅಧಿಕಾರಿ ಗಾಯತ್ರಿ ದೇಗಲಮಡಿ, ಮುಖಂಡರಾದ ಸಿದ್ದಯ್ಯ ಹಿರೇಮಠ, ಮಳೇಂದ್ರ ಡಾಂಗೆ, ರಮೇಶ ಪೂಜಾರಿ, ವಿನೋದ ಅಂಕಲಗಿ, ಬಸವರಾಜ ಕರಜಗಿ, ಪರಮೇಶ್ವರ ಬಂಡಾರಿ, ರುದ್ರಯ್ಯ ಕಳ್ಳಿಮಠ, ಶರಣು ಮೇತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT