ಆಳಂದ: ಬೈಕ್ಗಳನ್ನು ಕಳವು ಮಾಡಿ ಸಂಚರಿಸುತ್ತಿದ್ದ ಮೂವರು ಆರೋಪಿಗಳನ್ನು ತಾಲ್ಲೂಕಿನ ನರೋಣಾ ಠಾಣೆಯ ಪೊಲಿಸರು ಬಂಧಿಸಿದ್ದಾರೆ. ಆರೋಪಿಗಳಿಂದ 40 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಲಬುರ್ಗಿ ತಾಜಸುಲ್ತಾನಪುರದ ಇಸ್ಮಾಯಿಲ್ ಖಾಜಾಮೊದ್ದಿನ್ ಜಮದಾರ, ಗಫಾರ ಜಬ್ಬಾರ ಜಮದಾರ ಮತ್ತು ಆಳಂದ ತಾಲ್ಲೂಕಿನ ಬೆಳಮಗಿ ಗ್ರಾಮದ ನಿವಾಸಿ ಧೂಳಪ್ಪ ಸಿದ್ದಾರೂಡ ಸುತಾರ ಬಂಧಿತರು. ಇನ್ನೊಬ್ಬ ಆರೋಪಿ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಿವಾಸಿ ಗೌಸೋದ್ದಿನ್ ಮಹಮ್ಮದ್ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಶೋಧ ಮುಂದುವರೆದಿದೆ.
ಈ ಆರೋಪಿಗಳು ಕಡಗಂಚಿ ಕೇಂದ್ರೀಯ ವಿಶ್ವವಿದ್ಯಾಲಯದ ಮುಖ್ಯದ್ವಾರ, ಕಲಬುರ್ಗಿ, ಮಹಾಗಾಂವ, ಕಮಲಾಪುರ, ಬೀದರ್, ಜಹಿರಾಬಾದ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಬೈಕ್ ಕಳವು ಮಾಡಿ ಪರಾರಿಯಾಗುತ್ತಿದ್ದರು. ಇಸ್ಮಾಯಿಲ್ ಜಮದಾರನಿಂದ 14 ಬೈಕ್, ಗಫಾರ ಜಮಾದಾರನಿಂದ 13 ಮತ್ತು ಧೂಳಪ್ಪ ಸುತಾರನಿಂದ 13 ಬೈಕ್ಗಳು ವಶಪಡಿಸಿಕೊಳ್ಳಲಾಗಿದೆ ಎಂದು ಎಂದು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ತಿಳಿಸಿದರು.
ಮೂವರು ಆರೋಪಿಗಳು ಬೈಕ್ಗಳನ್ನು ಕಳವು ಮಾಡಿ, ಬೆಳಮಗಿಯಲ್ಲಿ ಸೈಕಲ್ ಪಂಕ್ಚರ್ ಕೆಲಸ ಮಾಡುತ್ತಿದ್ದ ಧೂಳಪ್ಪನ ಮೂಲಕ ಗ್ರಾಹಕರಿಗೆ ಮಾರುತ್ತಿದ್ದರು. ತಾಲ್ಲೂಕಿನ ಬೆಳಮಗಿ ಹಾಗೂ ಸುತ್ತಮುತ್ತಲಿನ ಬೆಳಮಗಿ ತಾಂಡಾಗಳಲ್ಲಿಯೇ 30ಕ್ಕೂ ಹೆಚ್ಚು ಹೊಸ ಬೈಕ್ ಮಾರಾಟ ಮಾಡಲಾಗಿದೆ. ಆಳಂದ, ಸಲಗರ, ಮುನ್ನೋಳ್ಳಿ ಮತ್ತಿತರ ಗ್ರಾಮದಲ್ಲಿಯೂ ಬೈಕ್ ಕಳವು ಮಾಡಲಾಗಿದೆ’ ಎಂದು ಪಿಎಸ್ಐ ಉದ್ದಂಡಪ್ಪ ತಿಳಿಸಿದರು.