ಅಫಜಲಪುರ: ‘ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಕನಕದಾಸರ ಜಯಂತಿ ಉತ್ಸವ ಸಮಿತಿಯ ವತಿಯಿಂದ ನ.30ರಂದು ವಿಜೃಂಭಣೆಯ ಕನಕ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ’ ಎಂದು ತಹಶೀಲ್ದಾರ್ ಸಂಜೀವಕುಮಾರ್ ದಾಸರ್ ತಿಳಿಸಿದರು
ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಸಮುದಾಯದ ಮುಖಂಡರು ಅದ್ದೂರಿಯಾಗಿ ಜಯಂತಿ ಆಚರಿಸಲು ನಿರ್ಧರಿಸಿದೆ. ಇದರಲ್ಲಿ ತಾಲ್ಲೂಕು ಆಡಳಿತವೂ ಭಾಗಿಯಾಗಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಸಮಾಜದ ಎಲ್ಲ ಮುಖಂಡರ ಸಹಕಾರ ಅಗತ್ಯ’ ಎಂದು ಅವರು ತಿಳಿಸಿದರು.
‘ಅಂದು ಬೆಳಿಗ್ಗೆ 9.30ಕ್ಕೆ ಪಟ್ಟಣದ ಅಮೋಘಸಿದ್ದ ದೇವಸ್ಥಾನದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಗುವುದು. ಬಳಿಕ ಕಲಾತಂಡ, ವಾದ್ಯಮೇಳ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುವುದು. ಬಳಿಕ ತಹಶೀಲ್ದಾರ್ ಕಚೇರಿ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದ್ದು ಹಾಲಿ, ಮಾಜಿ ಜನಪ್ರತಿನಿಧಿಗಳನ್ನು, ಗಣ್ಯರನ್ನು ಆಹ್ವಾನಿಸಲಾಗುವುದು’ ಎಂದು ತಿಳಿಸಿದರು.
ಸಭೆಯಲ್ಲಿ ಗ್ರೇಡ್–2 ತಹಶೀಲ್ದಾರ್ ಶರಣಬಸಪ್ಪ, ಸಮಾಜದ ತಾಲ್ಲೂಕು ಅಧ್ಯಕ್ಷ ಬೀರಣ್ಯ ಪೂಜಾರಿ, ಜೆ.ಎಂ.ಕೊರಬು, ರಮೇಶ್ ನೀಲಗಾರ್, ರಮೇಶ್ ಪೂಜಾರಿ ಉಡಚಣ, ಮಾಳಪ್ಪ ಪೂಜಾರಿ, ಸಾವಿರಪ್ಪ ಪೂಜಾರಿ, ಸೈದಪ್ಪ ಪೂಜಾರಿ, ಗುರುದೇವ್, ಯಲ್ಲಾಲಿಂಗ್ ಪೂಜಾರಿ ಮತ್ತಿತರಿದ್ದರು.