ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ಯಡಿಯೂರಪ್ಪ ಅವರು ಮಂಗಳವಾರ ಮಧ್ಯಾಹ್ನ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಊಟ ಮಾಡಿದ ಬಳಿಕ ಕೆಲಹೊತ್ತು ಜನತಾ ದರ್ಶನ ನಡೆಸಿದರು. ಸಾರ್ವಜನಿಕರು ಹಾಗೂ ಸಂಘಟನೆಗಳ ಮುಖಂಡರಿಗೆ ಶಾಮಿಯಾನದಲ್ಲಿ ಕುರ್ಚಿ ಹಾಕಿ ಕುಳಿತುಕೊಳ್ಳುವಂತೆ ಸೂಚಿಸಲಾಗಿತ್ತು. ಮುಖ್ಯಮಂತ್ರಿ ಬರುತ್ತಿದ್ದಂತೆಯೇ ನೂಕುನುಗ್ಗಲು ಹೆಚ್ಚಾಯಿತು. ಅರ್ಜಿ ಸಲ್ಲಿಸಲು ದಲಿತ ಸಂಘರ್ಷ ಸಮಿತಿ ಸದಸ್ಯರು ಮುಂದಾಗುವ ಬದಲು ಯಡಿಯೂರಪ್ಪ ಅವರ ಗಮನ ಸೆಳೆಯಲು ಘೋಷಣೆ ಕೂಗಲಾರಂಭಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತಿಭಟನಾಕಾರರನ್ನು ಅತಿಥಿಗೃಹದ ಮುಂಭಾಗದಿಂದ ಗೇಟಿನವರೆಗೆ ಕರೆದೊಯ್ದರು. ಆಗಲೂ ಘೋಷಣೆ ಕೂಗುವುದು ನಿಲ್ಲಿಸಲಿಲ್ಲ. ಗೇಟಿನ ಎದುರು ಕುಳಿತು ಧರಣಿಗೆ ಮುಂದಾದರು.