ಜೇವರ್ಗಿ: ತಾಲ್ಲೂಕಿನ ರೇವನೂರ ಗ್ರಾಮದ ತಾಂಡದಲ್ಲಿ ಸಾರಾಯಿ ಅಕ್ರಮವಾಗಿ ಮಾರಾಟ ಎಗ್ಗಿಲದೆ ನಡೆಯುತ್ತಿದ್ದು, ಮದ್ಯ ವ್ಯಸನಿಗಳ ಹಾವಳಿಯಿಂದ ಮಹಿಳೆಯರು ಹೊರಗೆ ತಿರುಗಾಡದಂತಹ ವಾತಾವರಣ ನಿರ್ಮಾಣವಾಗಿದೆ. ಅಕ್ರಮ ದಂಧೆ ನಡೆಸುವವರ ವಿರುದ್ಧ ಕ್ರಮಜರುಗಿಸಬೇಕು ಎಂದು ಸೋಮವಾರ ರೇವನೂರ ಗ್ರಾಮದ ತಾಂಡ ನಿವಾಸಿಗಳು ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರೇವನೂರ ಗ್ರಾಮದ ತಾಂಡದಲ್ಲಿ ಅನೇಕ ವರ್ಷಗಳಿಂದ ಪರವಾನಗಿ ಇಲ್ಲದೆ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ವೇಶ್ಯಾವಾಟಿಕೆ ದಂಧೆ ಕೂಡ ರಾಜಾರೋಷವಾಗಿ ನಡೆಸುತ್ತಿದ್ದು, ಇದರಿಂದ ಗ್ರಾಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕುಡುಕರ ಹಾವಳಿಯಿಂದ ಗ್ರಾಮದ ಮಹಿಳೆಯರು, ಯುವತಿಯರಿಗೆ ಸಮಸ್ಯೆ ಆಗುತ್ತಿದೆ. ಕೂಡಲೇ ಸಂಭಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಕ್ರಮವಾಗಿ ನಡೆಸುತ್ತಿರುವ ಸಾರಾಯಿ ಮಾರಾಟ ನಿಲ್ಲಿಸಬೇಕು. ನಿತ್ಯ ನಡೆಯುತ್ತಿರುವ ವೇಶ್ಯಾವಾಟಿಕೆ ದಂಧೆ ನಿಲ್ಲಿಸಬೇಕು. ಇದನ್ನು ನಡೆಸುತ್ತಿರುವವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರೇವನೂರ ತಾಂಡಾದ ಸಾರ್ವಜನಿಕರು ಮತ್ತು ಮಹಿಳೆಯರು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ವಿಷ್ಣು ಸೇನಾ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಬಾಗೇವಾಡಿ, ಅಪ್ಪಣ್ಣ ಪವಾರ, ಗೋವಿಂದ ಚವ್ಹಾಣ, ರಮೇಶ ರಾಠೋಡ, ಹೇಮು ನಾಯಕ, ರೇವು ಜಾಧವ ಸೇರಿದಂತೆ ರೇವನೂರ ಗ್ರಾಮದ ತಾಂಡ ನಿವಾಸಿಗಳು ಹಾಜರಿದ್ದರು.