ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಐನೋಳ್ಳಿಯ ಜೆಸ್ಕಾಂ ಕಿರಿಯ ಮಾರ್ಗದಾಳುವಿನ ಖಾಸಗಿ ಸಹಾಯಕ ಹಾರೂನಖಾನ ಪಠಾಣ (42) ವಿದ್ಯುತ್ ಅವಘಡದಲ್ಲಿ ಗಾಯೊಂಡು ಚಿಕಿತ್ಸೆಗೆ ಸ್ಪಂದಿಸದೇ ಮೀರಜ್ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.
ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ಇಲ್ಲಿನ ಚಂದಾಪುರ ಜೆಸ್ಕಾಂ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಎದುರು ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್ ನೇತೃತ್ವದಲ್ಲಿ ಕುಟುಂಬದ ಸದಸ್ಯರು ಸೋಮವಾರ ಶವವಿಟ್ಟು ಪ್ರತಿಭಟನೆ ನಡೆಸಿದರು.
ಜೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಖಂಡಪ್ಪ ಪ್ರತಿಭಟನಾ ನಿರತರ ಮನವಿ ಆಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಾಲಿ, ಭೀಮರಾವ್ ಬಡಿಗೇರ, ಅಲ್ಲಾವುದ್ದೀನ್ ಅನ್ಸಾರಿ, ವಿಶ್ವನಾಥ ಬೆನಕಿನ, ಸಯ್ಯದ್ ಖಲೀಲ್ ಪಟೇಲ್, ಕೆ.ಎಂ.ಬಾರಿ ಮೊದಲಾದವರು ಇದ್ದರು.