ಚಿಂಚೋಳಿ: ಭಾನುವಾರ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದ ತಗ್ಗು ಪ್ರದೇಶದ ಹೊಲಗಳಲ್ಲಿ ಬೆಳೆಗಳು ಜಲಾವೃತವಾದವು. ಕಟಾವು ಮಾಡಿ ರಾಶಿಗೆ ಹಾಕಿದ ಉದ್ದು ವಿವಿಧೆಡೆ ಮಳೆಗೆ ಆಹುತಿಯಾಗಿದೆ. ನಾಲಾ ನದಿ, ತೊರೆಗಳಲ್ಲಿ ಪ್ರವಾಹ ಕಾಣಿಸಿದ್ದು ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯಕ್ಕೆ 2,100 ಕ್ಯುಸೆಕ್ ಒಳಹರಿವು ದಾಖಲಾಗಿದೆ.
‘ಬೆಳಿಗ್ಗೆಯಿಂದಲೇ ಜಲಾಶಯದ ಗೇಟು ತೆರೆದು ಸರನಾಲಾ ನದಿಗೆ 1,200 ಕ್ಯುಸೆಕ್ ನೀರು ಬಿಡಲಾಗಿದೆ’ ಎಂದು ಚಂದ್ರಂಪಳ್ಳಿ ನೀರಾವರಿ ಯೋಜನೆಯ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚೇತನ ಕಳಸ್ಕರ್ ತಿಳಿಸಿದ್ದಾರೆ.
ಸದ್ಯ ಜಲಾಶಯದ ನೀರಿನ ಮಟ್ಟ 1616.5 ಅಡಿಯಿದೆ. ನಾಗರಾಳ ಜಲಾಶಯದ ನೀರಿನ ಮಟ್ಟ 490.37 ಮೀಟರ್ ಇದೆ ಎಂದು ಯೋಜನಾಧಿಕಾರಿ ಅರುಣಕುಮಾರ ವಡಗೇರಿ ತಿಳಿಸಿದ್ದಾರೆ. ಮಳೆಯಿಂದ ತಾಲ್ಲೂಕಿನ ಕರ್ಚಖೇಡದಲ್ಲಿ ವ್ಯಕ್ತಿಗೆ ಸಿಡಿಲು ಬಡಿದಿದೆ. ಗಾಯಾಳು ಆನಂದ ಮಾಣಿಕಪ್ಪ ಯಂಪಳ್ಳಿ ಸುಟ್ಟ ಗಾಯಗಳಿಂದ ನರಳುತ್ತಿದ್ದು, ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗ್ರಾಮದ ಶಂಕರ ಮುತ್ತಂಗಿ ಮತ್ತು ಶ್ರೀನಿವಾಸ ಯಂಪಳ್ಳಿ ತಿಳಿಸಿದ್ದಾರೆ.
ಕುಂಚಾವರಂ 60, ಚಿಂಚೋಳಿ 42, ಕೋಡ್ಲಿ 38, ನಿಡಗುಂದಾ 32, ಸುಲೇಪೇಟ 28, ಐನಾಪುರ 15, ಚಿಮ್ಮನಚೋಡ 12 ಮಿ.ಮೀ ಮಳೆಯಾಗಿದೆ. ತಾಲ್ಲೂಕಿನ ಭೂತಪೂರ ಚಿಂತಪಳ್ಳಿ ಮಧ್ಯೆ ಸೇತುವೆ ಮೇಲಿನಿಂದ ನೀರು ಹರಿದು ಕೆಲ ಕಾಲ ಸಂಪರ್ಕ ಕಡಿತವಾಗಿತ್ತು.
ಮಳೆಯಿಂದ ಐನಾಪುರದಲ್ಲಿ 2, ಕುಂಚಾವರಂನಲ್ಲಿ 1 ಮನೆ ಮಳೆಯಿಂದ ಭಾಗಶಃ ಕುಸಿದಿವೆ. ಸುಲೇಪೇಟದಲ್ಲಿ 4 ಮನೆಗಳಿಗೆ ನೀರು ನುಗ್ಗಿದೆ ಎಂದು ಚಿಂಚೋಳಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದ್ದಾರೆ.
ಚಂದ್ರಂಪಳ್ಳಿ ಜಲಾಶಯದಿಂದ ನದಿಗೆ ಬಿಟ್ಟಿದ್ದರಿಂದ ಗ್ರಾಮದ ಪ್ರವೇಶದ ಸೇತುವೆಯ ಕೆಳಗಿನಿಂದ ನೀರು ಭೋರ್ಗರೆಯಿತು