ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಈ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ, ಸಚಿವ ರಾಜಶೇಖರ ಬಿ.ಪಾಟೀಲ ಹುಮನಾಬಾದ್ ಹೇಳಿದರು.
ಮಂಡಳಿಯ ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ನಂತರ ಅವರು ಮಾತನಾಡಿದರು.
‘2018-19ನೇ ಸಾಲಿನ ಕ್ರಿಯಾ ಯೋಜನೆ ರೂಪಿಸಲು ಎಲ್ಲ ಜಿಲ್ಲೆಗಳಿಗೆ ತಿಳಿಸಲಾಗಿದೆ. ಬೀದರ್, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳ ಕ್ರಿಯಾ ಯೋಜನೆಗಳ ಸಲ್ಲಿಕೆ ಬಾಕಿದೆ. ಆದಷ್ಟು ಬೇಗ ಕ್ರಿಯಾ ಯೋಜನೆಗಳನ್ನು ಪಡೆದು ಅನುಮೋದನೆ ನೀಡಲಾಗುವುದು’ ಎಂದರು.
‘ಎಚ್ಕೆಆರ್ಡಿಬಿಯ ವ್ಯವಸ್ಥೆ ಬದಲಾಯಿಸಬೇಕಿದ್ದು, ಮುಖ್ಯಮಂತ್ರಿ ಅವರೊಂದಿಗೆ ಈ ನಿಟ್ಟಿನಲ್ಲಿ ಚರ್ಚಿಸಲಾಗಿದೆ. ಮಂಡಳಿಯ ಕಾರ್ಯದರ್ಶಿ ಅವರೊಂದಿಗೆ ಸಮಗ್ರವಾಗಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.
‘ಎಚ್ಕೆಆರ್ಡಿಬಿ ರಚನೆಯಾದ ನಂತರ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ನಂಜುಂಡಪ್ಪ ವರದಿ ಅನುಸಾರ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದರು.
ಮಂಡಳಿಯ ಕಾರ್ಯದರ್ಶಿ ಸುಬೋಧ್ ಯಾದವ, ವಿಧಾನ ಪರಿಷತ್ ಸದಸ್ಯರಾದ ವಿಜಯ ಸಿಂಗ್, ಅರವಿಂದ ಅರಳಿ, ಬೀದರ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿ ಶೇರಿಕಾರ ಇದ್ದರು.
37 ಖಾಲಿ ಹುದ್ದೆ
‘ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಒಟ್ಟು 83 ಮಂಜೂರಾದ ಹುದ್ದೆಗಳಿದ್ದು, ಅವುಗಳ ಪೈಕಿ 46 ಭರ್ತಿಯಾಗಿವೆ. ಇನ್ನೂ 37 ಹುದ್ದೆ ಖಾಲಿ ಇದ್ದು, ಇದರಿಂದ ಮಂಡಳಿಯ ಕಾಮಗಾರಿ ನಿಧಾನಗತಿಗೆ ಇದೂ ಕಾರಣವಾಗಿದೆ’ ಎಂದು ಸಚಿವರು ಹೇಳಿದರು.
ಎಚ್ಕೆಆರ್ಡಿಬಿಯಿಂದ ಹಣ ವಿನಿಯೋಗ
* ₹2,928.97 ಕೋಟಿ ವೆಚ್ಚ * 13,623 ಅನುಮೋದನೆ ನೀಡಿರುವ ಕಾಮಗಾರಿ * 8,462 ಪೂರ್ಣಗೊಂಡಿರುವ ಕಾಮಗಾರಿ * 3,409 ಪ್ರಗತಿಯಲ್ಲಿರುವ ಕಾಮಗಾರಿ * 1,752 ಪ್ರಾರಂಭಗೊಳ್ಳಬೇಕಿವ ಕಾಮಗಾರಿ (2013–14ರಿಂದ ಈ ವರೆಗಿನ ಮಾಹಿತಿ)