ಕಲಬುರ್ಗಿ: ನಗರದ ಪೊಲೀಸ್ ಕಮಿಷನರ್ ಆಗಿದ್ದ ಎನ್.ಸತೀಶಕುಮಾರ ಅವರನ್ನು ಬೆಳಗಾವಿ ವಲಯದ ಐಜಿಪಿಯಾಗಿ ಸರ್ಕಾರ ವರ್ಗಾವಣೆ ಮಾಡಿದೆ. ಇಲ್ಲಿನ ನೂತನ ಕಮಿಷನರ್ ಆಗಿ ವೈ.ಎಸ್.ರವಿಕುಮಾರ ಅವರನ್ನು ನಿಯೋಜನೆ ಮಾಡಿದೆ.
ಒಂದು ವರ್ಷದಿಂದ ಕಲಬುರ್ಗಿ ಆಯುಕ್ತಾಲಯದ ಆಯುಕ್ತರಾಗಿ ಸತೀಶಕುಮಾರ ಸೇವೆ ಸಲ್ಲಿಸಿದರು. ಕೆಲ ತಿಂಗಳ ಹಿಂದೆ ಅವರಿಗೆ ಐಜಿಪಿ ಹುದ್ದೆ ಬಡ್ತಿ ಸಿಕ್ಕಿತ್ತು.
ರವಿಕುಮಾರ ಅವರು 2007ನೇ ಸಾಲಿನ ಐಪಿಎಸ್ ಕೇಡರ್ನ ಅಧಿಕಾರಿ. ಸದ್ಯ ಅವರು ಬೆಂಗಳೂರಿನಲ್ಲಿ ನೇಮಕಾತಿ ವಿಭಾಗದ ಡಿಐಜಿ ಆಗಿದ್ದರು.
ಇದರ ಮಧ್ಯೆ, ಕಲಬುರ್ಗಿ ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬಿಕರ್ ಅವರಿಗೆ ಬಳ್ಳಾರಿ ವಲಯದ ಐಜಿಪಿ ಹುದ್ದೆಯ ಪ್ರಭಾರವನ್ನೂ ವಹಿಸಲಾಗಿದೆ.