ಕಲಬುರ್ಗಿ: ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮದಲ್ಲಿ ಸೋಮವಾರ ಸಂಜೆ ರವಿ ತಳವಾರ ಅಲಿಯಾಸ್ ಅಭಯ ಎಂಬಾತ ಅದೇ ಗ್ರಾಮದ ಸೈಬಣ್ಣ ನೀಲಕಂಠ ತಳವಾರ (28) ಎಂಬ ಯುವಕನಿಗೆ ನಾಡ ಪಿಸ್ತೂಲ್ನಿಂದ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಗುಂಡು ತಗುಲಿದ ಬಳಿಕ ತೀವ್ರವಾಗಿ ನರಳಾಡುತ್ತಿದ್ದ ಸೈಬಣ್ಣನನ್ನು ಕಲಬುರ್ಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ.
ಹಳೆಯ ವೈಷಮ್ಯವೇ ಗುಂಡಿನ ದಾಳಿಗೆ ಕಾರಣ ಎಂದು ತಿಳಿದು ಬಂದಿದೆ.
ಕೊಲೆ ಆರೋಪಿ ಈ ಹಿಂದೆ ಅಕ್ರಮ ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ಎಂದು ಗೊತ್ತಾಗಿದೆ. ಸ್ಥಳಕ್ಕೆ ಸಿಪಿಐ ಮಹಾಂತೇಶ ಪಾಟೀಲ, ಪಿಎಸ್ಐ ಮಂಜುನಾಥ ಹೂಗಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ.