ಕಲಬುರಗಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತಾಗಿ ಏಕವಚನದಲ್ಲಿ ಮಾತನಾಡುವ ಮೂಲಕ ಸಂಸದ ಅನಂತಕುಮಾರ ಹೆಗಡೆ ಅವರು ತಮ್ಮ ಸಂಸ್ಕೃತಿ ಏನು ಎಂಬುದನ್ನು ತೋರಿಸಿದ್ದಾರೆ. ಎದುರಿನವರ ಬಗ್ಗೆ ಹೀನವಾಗಿ ಮಾತನಾಡಿದ ಬಳಿಕ ಯಾರೂ ದೊಡ್ಡವರಾಗಲ್ಲ’ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ಇಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಸಮಾಜಕ್ಕೆ ಅನಂತಕುಮಾರ ಕೊಡುಗೆ ಏನಿದೆ? ಸಮಾಜವನ್ನು ಕಟ್ಟುವ, ಅಭಿವೃದ್ಧಿಯ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ. ಐದು ವರ್ಷ ಏನೂ ಕೆಲಸ ಮಾಡಿದೆ, ಈಗ ಮುಂಬರವ ಚುನಾವಣೆಯಲ್ಲಿ ಮತಗಳಿಗಾಗಿ ಇಂತಹ ತಂತ್ರಕ್ಕೆ ಮೊರೆ ಹೋಗಿದ್ದಾರೆ’ ಎಂದರು.
‘ನಾವು ಯಾರನ್ನೂ, ರಾಜಕೀಯ ವಿರೋಧಿಗಳನ್ನು ವೈರಿಗಳಂತೆ ಕಾಣುವುದಿಲ್ಲ. ಸಿದ್ಧಾಂತಗಳು ಬೇರೆ–ಬೇರೆಯಾಗಿದ್ದರೂ ನಾವು ವೈರಿಗಳಲ್ಲ. ಯಾರ ಸಂಸ್ಕೃತಿ ಒಳ್ಳೆಯದು, ಕೆಟ್ಟದ್ದು ಎಂಬುದನ್ನು ಜನರು ನಿರ್ಧರಿಸುತ್ತಾರೆ’ ಎಂದು ಹೇಳಿದರು.
ಬಾಯಿ ಶುದ್ಧೀಕರಣ ಮಾಡಿಕೊಳ್ಳಲಿ: ಅನಂತಕುಮಾರ ಹೆಗಡೆ ಅವರು ಮಸೀದಿ ಬೀಳುಸುವ ಹೇಳಿಕೆ ಕೊಡುವ ಮೂಲಕ ಕೋಮುವಾದಿ ಬೀಜ ಬಿತ್ತುತ್ತಿದ್ದಾರೆ. ಸಂಸದ ಸ್ಥಾನದಲ್ಲಿ ಇರುವರು ಬಾಯಿ ಶುದ್ಧೀಕರಣ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ ಟೀಕಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವಕಾಶವಾದಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಟಿಕೆಟ್ಗಾಗಿ ಪಕ್ಷದ ವರಿಷ್ಠರನ್ನು ಓಲೈಸಲು ಇಂತಹ ಹೇಳಿಕೆ ಕೊಡುತ್ತಿದ್ದಾರೆ. ತಪ್ಪಾದ ಹೇಳಿಕೆಯನ್ನು ತಿದ್ದಿಕೊಳ್ಳದೆ ಪದೇ ಪದೇ ಸಮರ್ಥಿಸಿಕೊಳ್ಳುತ್ತಿರುವುದು ಅಕ್ಷಮ್ಯ. ಕೇಂದ್ರ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿ, ಜನಪರವಾಗಿ ಯಾವ ಕೆಲಸ ಮಾಡಿದ್ದಾರೆ? ಮುಖ್ಯಮಂತ್ರಿಗಳ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.