ಕಲಬುರಗಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿದ್ದ ಬೈಕ್ ರ್ಯಾಲಿಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಜಗತ್ ವೃತ್ತದಲ್ಲಿ ಮಂಗಳವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತಚಲಾಯಿಸಬೇಕು. ಮತದಾನದ ಜಾಗೃತಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೇ 7ರಂದು ಯಾವುದೇ ಕೆಲಸ ಇದ್ದರೂ ಅದನ್ನು ಬದಿಗೆ ಇರಿಸಿ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ, ಸ್ವೀಪ್ ಸಮಿತಿಯ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಮಾತನಾಡಿ, ‘ಯಾವುದೇ ವ್ಯಕ್ತಿಯು ಮತದಾನದಿಂದ ವಂಚಿತರಾಗಬಾರದು. ಯಾವುದೇ ಭಯಪಡದ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಬೇಕು. ಮತದಾನದ ಪ್ರಮಾಣ ಹೆಚ್ಚಳಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು’ ಎಂದು ಹೇಳಿದರು.
ಇದೇ ವೇಳೆ ಮತದಾನ ಜಾಗೃತಿಯ ಆಕಾಶ ಬುಟ್ಟಿ ಹಾರಿಸಲಾಯಿತು. ಸೆಲ್ಫಿ ಪಾಯಿಂಟ್, ಸಹಿ ಅಭಿಯಾನ ನಡೆಸಲಾಯಿತು.
ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ್, ಉಪ ಆಯುಕ್ತ ಮಾಧವ ಗಿತ್ತೆ, ಎಇಇ ಶಿವನಗೌಡ ಪಾಟೀಲ, ಪರಿಸರ ಎಂಜಿನಿಯರ್ ಸುಷ್ಮಾ ಸಾಗರ, ಸಮುದಾಯದ ವ್ಯವಹಾರ ಅಧಿಕಾರಿ ವಿಜಯಲಕ್ಷ್ಮಿ ಪಟ್ಟೇದಾರ ಇತರರು ಉಪಸ್ಥಿತರಿದ್ದರು.