ಚಿತ್ತಾಪುರ: ವನ್ಯಜೀವಿ ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಕಾಡು ಪ್ರಾಣಿ ಬೇಟೆಯಾಡಿ ಮಾಂಸ ಪಾಲು ಮಾಡಿಕೊಳ್ಳುತ್ತಿರುವ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಅರಣ್ಯ ಇಲಾಖೆ ಅಧಿಕಾರಿಗಳು ಚಾಕು, ಬೈಕ್, ಮಾಂಸದ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಳಗಿ ತಾಲ್ಲೂಕಿನ ಗೋಟೂರು ತಾಂಡಾ ಸಮೀಪ ಕಾಡು ಪ್ರಾಣಿಯ ಬೇಟೆಯಾಡಿ, ಅದಕ್ಕೆ ಬಳಸಿದ ಐದು ಚಾಕು, ಕಾಡು ಪ್ರಾಣಿಯ ಮಾಂಸ, ಬೈಕ್ ಜಪ್ತಿ ಮಾಡಿಕೊಂಡಿರುವ ಅಧಿಕಾರಿಗಳು ಹಣಮಂತ ಲಕುಮು ರಾಠೋಡ, ಸಂತೋಷ ಶಿವರಾಮ ಜಾಧವ ಎಂಬ ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಾದೇಶಿಕ ಅರಣ್ಯ ಅಧಿಕಾರಿ ವಿಜಯಕುಮಾರ ಅವರು ಖಚಿತ ಮಾಹಿತಿಯೊಂದಿಗೆ ದಾಳಿ ಮಾಡಿ, ಕಾಡು ಹಂದಿ ಬೇಟೆಯಾಡಿದ ಆರೋಪಿಗಳು ಕೊಂದಿರುವ ಹಂದಿಯನ್ನು ಬೆಂಕಿಯಲ್ಲಿ ಸುಟ್ಟು ಪಾಲು ಮಾಡಿಕೊಳ್ಳುತ್ತಿರುವಾಗ ಸಿಬ್ಬಂದಿಯೊಂದಿಗೆ ಸುತ್ತುವರಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.