ಜೇವರ್ಗಿ: ‘ದೇಶದ ಅಭಿವೃದ್ಧಿಗಾಗಿ ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿತ ಎನ್ಡಿಎ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.
ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯನ್ನು ಇದೇ 20ರಂದು ಸಂಜೆ 4 ಗಂಟೆಗೆ ಚನ್ನೂರ ರಸ್ತೆಯಲ್ಲಿರುವ ಬಸವೇಶ್ವರ ಸ್ಟೋನ್ ಕ್ರಷರ್ನಲ್ಲಿ ನಡೆಯಲಿದೆ’ ಎಂದು ಹೇಳಿದರು.
ದೇಶದ ಹಿತದೃಷ್ಟಿಯಿಂದ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು, ರಾಜ್ಯದ ನಾಯಕರ ಆದೇಶದಂತಯೆ ಕಲಬುರಗಿ ಲೋಕಸಭೆ ಎನ್ಡಿಎ ಅಭ್ಯರ್ಥಿ ಗೆಲುವಿಗಾಗಿ ಜೆಡಿಎಸ್ ಪಕ್ಷ ಶ್ರಮಿಸಲಿದೆ. ಈ ಬಾರಿ ಕಲಬುರಗಿ ಲೋಕಸಭೆ ಎನ್ಡಿಎ ಅಭ್ಯರ್ಥಿ ಗೆಲ್ಲುವುದು ನಿಶ್ಚಿತವಾಗಿದೆ’ ಎಂದು ಹೇಳಿದರು.
‘5 ಗ್ಯಾರಂಟಿ ನೀಡಿದ್ದೇವೆ ಎಂದು ಹೇಳುವ ಕಾಂಗ್ರೆಸ್ನವರು ಈ ಸಲ ಲೋಕಸಭೆಯಲ್ಲಿ ಎಷ್ಟು ಸೀಟು ಗೆಲ್ಲುತ್ತಾರೆ ನೋಡೋಣ. ಜೊತೆಗೆ ಜೇವರ್ಗಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು 10 ಸಾವಿರ ಲೀಡ್ ಪಡೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಅದೇ 10 ಸಾವಿರ ಲೀಡ್ ಮಾಡಿ ತೋರಿಸಲಿ. ಲೀಡ್ ಆಗದಿದ್ದರೆ ಶಾಸಕ ಡಾ.ಅಜಯಸಿಂಗ್ ಅವರು ರಾಜೀನಾಮೆ ನೀಡಲಿ’ ಎಂದು ಸವಾಲು ಹಾಕಿದರು.
ರಮೇಶಬಾಬು ವಕೀಲ, ದಂಡಪ್ಪ ಸಾಹು ಕುಳಗೇರಿ, ಜೇವರ್ಗಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರೌಫ್ ಹಲವ್ದಾರ್, ಯಡ್ರಾಮಿ ತಾಲೂಕ ಘಟಕದ ಅಧ್ಯಕ್ಷ ಗೊಲ್ಲಾಳಪ್ಪ ಖಡಿ, ಪುಂಡಲಿಕ ಗಾಯಕವಾಡ, ಶರಣು ಹೊಸಮನಿ, ಶ್ರೀಶೈಲ ಕರಕಳ್ಳಿ, ಈರಣ್ಣ ಜವಳಿ, ಭೀಮಾಶಂಕರ ಉಪಸ್ಥಿತರಿದ್ದರು.