ಸೇಡಂ: ಬಟ್ಟೆ ತೊಳೆಯಲು ಹೋಗಿ ನದಿಪಾಲಾದ ಮಹಿಳೆ

ಸೇಡಂ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಸಂಗಾವಿ (ಎಂ) ಗ್ರಾಮದ ಬಳಿಯ ಕಾಗಿಣಾ ನದಿಯಲ್ಲಿ ಬಟ್ಟೆಯ ತೊಳೆಯಲು ಹೋದ ಮಹಿಳೆ ಶುಕ್ರವಾರ ನೀರಿನಲ್ಲಿ ಕೊಚ್ಚಿಕೊಂಡ ಹೋಗಿದ್ದಾಳೆ.
ಗ್ರಾಮದ ಮಾಣಿಕಮ್ಮ ಗಂಡ ಸಂಗಪ್ಪ (28) ಎನ್ನುವ ಮಹಿಳೆಯೇ ನೀರು ಪಾಲಾಗಿದ್ದಾಳೆ. ಬಟ್ಟೆ ತೊಳೆಯಲು ಕಾಗಿಣಾ ನದಿಗೆ ತೆರಳಿದ್ದ ಸಂದರ್ಭದಲ್ಲಿ ಬಟ್ಟೆಯನ್ನು ತುಂಬಿದ್ದ ಬುಟ್ಟಿ ನೀರಿಗೆ ಉರುಳಿದೆ. ಅದನ್ನು ತೆಗೆದುಕೊಳ್ಳಲು ಮುಂದಾದಾಗ ನದಿ ನೀರಿಗೆ ಕೊಚ್ಚಿಕೊಂಡು ಹೋಗಿದ್ದಾಳೆ ಎನ್ನಲಾಗಿದೆ.
ಗ್ರಾಮದ ಕವಿತಾ ಎನ್ನುವರು ನದಿಯತ್ತ ತೆರಳಿದಾಗ ವಿಷಯ ಗಮನಕ್ಕೆ ಬಂದಿದೆ. ಸುದ್ದಿ ತಿಳಿದು ಗ್ರಾಮಸ್ಥರು ನದಿಯತ್ತ ದೌಡಾಯಿಸಿ ಅಗ್ನಿಶಾಮಕ ಠಾಣೆ ಸೇರಿದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಳಖೇಡ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಿನ ಪೂರ್ತಿ ದೋಣಿ ಮೂಲಕ ಕಾಗಿಣಾ ನದಿಯ ದಂಡೆಗಳಲ್ಲಿ ಹಾಗೂ ಮುಳ್ಳುಕಂಟಿಗಳಲ್ಲಿ ಹುಡುಕಿದ್ದಾರೆ. ಜೊತೆಗೆ ಮಳಖೇಡ ಸೇತುವೆವರೆಗೆ ತೆರಳಿ ಕಾರ್ಯಾಚರಣೆ ನಡೆಸಿದರೂ ಮಹಿಳೆ ದೇಹ ಸಿಗಲಿಲ್ಲ. ಶನಿವಾರವೂ ಕಾರ್ಯಾಚರಣೆ ನಡೆಯಲಿದೆ.
ಮಾಣಿಕಮ್ಮ ಅವರಿಗೆ ಗಂಡ, ಒಂದು ಗಂಡು, ಒಂದು ಹೆಣ್ಣು ಮಗು ಇದೆ. ಕೊಡದೂರ ಗ್ರಾಮದ ಮಹಿಳೆಯಾಗಿದ್ದು ಸಂಗಾವಿ (ಎಂ) ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು.
ಸ್ಥಳಕ್ಕೆ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಪಡೆದರು. ಮಳಖೇಡ ಠಾಣೆಯ ಪಿಎಸ್ಐ ಪೃಥ್ವಿರಾಜ ತಿವಾರಿ, ಎಎಸ್ಐ ಶಿವಶರಣಪ್ಪ, ಹುಲಿಗೆಪ್ಪ ಭೇಟಿ ನೀಡಿದರು.
ಮಾಣಿಕಮ್ಮ ಅವರ ಮಾವ 'ಬಟ್ಟೆ ತೊಳೆಯಲು ನೀರಿಗೆ ಹೋಗಬೇಡ. ಮನೆಯಲ್ಲಿಯೇ ನೀರು ತುಂಬಿಟ್ಟಿದ್ದೇನೆ. ಅವುಗಳಲ್ಲಿಯೇ ಬಟ್ಟೆ ತೊಳೆ, ನದಿಯಲ್ಲಿ ನೀರು ಬಹಳ ಇದೆ' ಎಂದು ಹೇಳಿದ್ದರು. ಆದರೂ ಮಹಿಳೆ ನದಿಗೆ ಹೋಗಿದ್ದಳು ಎಂದು ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.