ಸೇಡಂ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮಳಖೇಡ ಸಿಮೆಂಟ್ ಕಾರ್ಖಾನೆಯಲ್ಲಿ ಕ್ಲಿಂಕರ್ ಸೋಲೊ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ತಾಲ್ಲೂಕಿನ ಹಂಗನಳ್ಳಿ ಗ್ರಾಮದ ಸಂಜೀವಕುಮಾರ ಏವೂರ (34) ಮೃತ ಕಾರ್ಮಿಕ. ರಾಜಶ್ರೀ ಸಿಮೆಂಟ್ ಕಂಪೆನಿಯಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂಜೀವಕುಮಾರ ಏವೂರ ಸೋಮವಾರ ರಾತ್ರಿ ಕರ್ತವ್ಯಕ್ಕೆ ಹಾಜರಾಗಿದ್ದ. ರಾತ್ರಿವೇಳೆಯಲ್ಲಿ ಕರ್ತವ್ಯದಲ್ಲಿದ್ದಾಗ ಕ್ಲಿಂಕರ್ ಸೋಲೊ ಬೆಲ್ಟ್ ಗೆ ಸಿಲುಕಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
14 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಸಂಜೀವಕುಮಾರ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ. ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಘಟನೆಯಿಂದಾಗಿ ಕುಟುಂಬದ ಪರಿಸ್ಥಿತಿಗೆ ಸಿಡಿಲು ಬಡಿದಂತಾಗಿದ್ದು, ಕುಟುಂಬದ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಕಾರ್ಮಿಕ ಸಂಘಟನೆ ಹಾಗೂ ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ಅಲ್ಲಿಯವರೆಗೆ ಅಂಯದ್ರೆ ಸುಮಾರು 12 ಗಂಟೆಗಳ ಕಾಲ ಶವ ಸೋಲೊ ಬೆಲ್ಟ್ ಮೇಲೆ ಇತ್ತು. ಕೊನೆಗೆ ಕಂಪೆನಿಯ ಮೃತನ ಪತ್ನಿಗೆ ನೌಕರಿ, ₹ 21 ಲಕ್ಷ ಪರಿಹಾರ, ಮಕ್ಕಳಿಬ್ಬರ ಪಿಯುಸಿವರೆಗಿನ ಶಿಕ್ಷಣ ಕೊಡಿಸುವುದಾಗಿ ಭರವಸೆ ನೀಡಿದ ನಂತರ ಶವ ಹೊರತೆಗೆಯಲಾಯಿತು ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಮೃತನ ಅಂತ್ಯಕ್ರಿಯೆ ಜರುಗಿತು.
ಕಾರ್ಮಿಕ ಸಂಘಟನೆಯ ಅಧ್ಯಕ್ಷ ಮರೆಪ್ಪ ಪೂಜಾರಿ, ರಮೇಶ ನಂದೂರ, ಜಗದೀಶ್ವರಯ್ಯ ಸ್ವಾಮಿ, ರಾಮು ಜಾಧವ್, ಸುರೇಶ ರೆಡ್ಡಿ, ಬಸವರಾಜ ಮಾಲಿಪಾಟೀಲ, ನಾಗೇಶ ಹಲಗೇರಿ, ಶರಣಪ್ಪ ಸಜ್ಜನ್ ಇದ್ದರು.