ಚಿಂಚೋಳಿ: ತಾಲ್ಲೂಕಿನ ಶ್ರೀನಗರ ಪೆದ್ದಾ ತಾಂಡಾದಲ್ಲಿ ದೀಪಾವಳಿ ಹಬ್ಬವನ್ನು ವಿಶಿಷ್ಟವಾಗಿ ಬುಧವಾರ ಆಚರಿಸಿದರು. ಮಕ್ಕಳ ಮಾರಾಟದ ತಾಂಡಾ ಎಂಬ ಕಪ್ಪುಚುಕ್ಕೆ ಹೊಂದಿರುವ ಶ್ರೀನಗರ ಪೆದ್ದಾ ತಾಂಡಾದಲ್ಲಿ ಹೆಣ್ಣು ಶಿಶುವನ್ನು ಲಕ್ಷ್ಮಿದೇವಿ ರೂಪದಲ್ಲಿ ಯುವತಿಯರು ಹೂವಿನ ಬುಟ್ಟಿಯಲ್ಲಿ ಕೂಡಿಸಿ ಮೆರವಣಿಗೆ ನಡೆಸುವ ಮೂಲಕ ಹೆಣ್ಣು ಶಿಶುಗಳ ಮಹತ್ವವನ್ನು ಸಾರಿದರು.
ತಾಲ್ಲೂಕಿನಲ್ಲಿಯೇ ಅತ್ಯಂತ ದೊಡ್ಡ ತಾಂಡಾ ಎಂಬ ಹೆಗ್ಗಳಿಕೆ ಹೊಂದಿರುವ ಶ್ರೀನಗರ ಪೆದ್ದಾ ತಾಂಡಾದಲ್ಲಿ ತೆಲಂಗಾಣ -ಆಂಧ್ರ ಸಂಸ್ಕೃತಿ ಬೇರೂರಿದೆ. ನೆರೆಯ ತೆಲಂಗಾಣದಂತೆಯೇ ಹೆಣ್ಣು ಶಿಶುಗಳನ್ನು ಹೂವಿನ ಬುಟ್ಟಿಯಲ್ಲಿ ಕೂಡಿಸಿಕೊಂಡು ತಾಂಡಾದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಗಮನ ಸೆಳೆದರು.
ಆಯಕಟ್ಟಿನ ಸ್ಥಳದಲ್ಲಿ ಸ್ಥಳೀಯರು ವಾದ್ಯಮೇಳದ ಜತೆಗೆ ಶಿಶುಗಳೊಂದಿಗೆ ಕಾಯುತ್ತಿರುತ್ತಾರೆ. ಹೂವಿನ ಬುಟ್ಟಿ ಹೊತ್ತು ಬಂದ ಯುವತಿಯರನ್ನು ಗೌರವಿಸಿ ಅವರ ಬುಟ್ಟಿಯಲ್ಲಿ ಶಿಶುಗಳ ನ್ನು ಕೂಡಿಸಿಕೊಂಡು ಸೇವಾ ಲಾಲ ಮರಿಯಮ್ಮ ದೇವಿ ಮಂದಿರದವರೆಗೆ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಯುವತಿಯರು ಸಾಂಪ್ರದಾಯಿಕ ನೃತ್ಯ ಮಾಡಿದರು.
ಸಂಭ್ರಮದ ಗೋದನ ಪೂಜೆ: ಸಂಜೆಗೆ ಗೋದನ(ಸೆಗಣಿ) ಪೂಜೆಯ ನಂತರ ತಾಂಡಾದಲ್ಲಿ ಮದುವಣಗಿತ್ತಿಯರು (ಮದುವೆ ನಿಶ್ಚಯವಾದ ಯುವತಿ) ತಾಂಡಾದ ಮನೆಗೆ ತೆರಳಿ ಮನೆಯ ಮುಂದಿನ ಗೋದನಕ್ಕೆ ಅಕ್ಕಿ ಹಿಟ್ಟು ಬೆಲ್ಲ ಹಾಗೂ ನೀರು ಅರ್ಪಿಸಿ ನನಗೆ ಈ ತಾಂಡಾದ ಋಣ ತೀರಿದೆ. ನೀವು ನಮ್ಮ ಮನೆಯವರನ್ನು ಚನ್ನಾಗಿ ನೋಡಿಕೊಳ್ಳಿ ಎಂಬ ಸಂದೇಶ ಸಾರುವ ಗೋರ್ ಬಂಜಾರಾ ಭಾಷೆಯ ಹಾಡು ಹಾಡಿದರು. ನೃತ್ಯ ಮಾಡಿ ರಂಜಿಸಿದರು.
ತಾಂಡಾದ ಪ್ರತಿಯೊಂದು ಮನೆಗೆ ತೆರಳಿ ಸಾಂಪ್ರದಾಯಿಕ ಹಾಡು ಹೇಳುತ್ತ ಪೂಜೆ ನೆರವೇರಿಸಿದ್ದು ವಿಶೇಷವಾಗಿತ್ತು. ಇಲ್ಲಿನ ಚಂದಾಪುರ ಗಂಗೂನಾಯಕ ತಾಂಡಾದಲ್ಲಿ ನಡೆದ ದೀಪಾವಳಿ ಸಂಭ್ರಮದಲ್ಲಿ ಗೇಮು ನಾಯಕ, ಕಿಶನ ಕಾರಭಾರಿ, ರಮೇಶ ಕಾರಭಾರಿ, ಶಿವರಾಂ ಡಾವ್, ವಾಚು ರಾಠೋಡ, ವನ್ಯಜೀವಿ ಧಾಮ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ, ಬಾಲು ಪೂಜಾರಿ, ಚಂದ್ರು ಜಾಧವ, ಫೂಲಸಿಂಗ್ ರಾಠೋಡ, ರಾಜು ಚವ್ಹಾಣ, ರಾಜು ಮೇಘರಾಜ ಪವಾರ, ನಾರಾಯಣ ಚವ್ಹಾಣ, ದಶರಥ ಚವ್ಹಾಣ ಮೊದಲಾದವರು ಇದ್ದರು.
ತಾಲ್ಲೂಕಿನ ಐನೊಳ್ಳಿ ತಾಂಡಾದಲ್ಲಿ ನಡೆದ ದೀಪಾವಳಿ ಸಂಭ್ರಮದಲ್ಲಿ ಮೋನು ನಾಯಕ, ನಾಮು ಕಾರಭಾರಿ, ಲಕ್ಷ್ಮಣ ಹಾಮಜಿ, ನರಸಿಂಗ್ ಚಿನ್ನಾ ರಾಠೋಡ, ಜೇಮಸಿಂಗ್ ರಾಠೋಡ ಪೂಜಾರಿ, ಸುಭಾಷ ರಾಠೋಡ ಹಾಗೂ ಉಪ ವಲಯ ಅರಣ್ಯಾಧಿಕಾರಿ ಸಿದ್ಧಾರೂಢ ಹೊಕ್ಕುಂಡಿ ಮೊದಲಾದವರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.