ತೀರ್ಥೊದ್ಭವದ ಮರುದಿನ ಮನೆಯನ್ನು ಗಂಗೋದಕದಿಂದ ಶುಭ್ರಗೊಳಿಸಿ ಸ್ನಾನಾದಿಗಳ ಬಳಿಕ ಹೊಸ ಬಟ್ಟೆ ತೊಟ್ಟು ‘ಕಣಿ ಪೂಜೆ’ಗೆ ಸಿದ್ದತೆ ನಡೆಯುತ್ತದೆ. ಮುತ್ತೈದೆಯರು ತಳಿಯಕ್ಕಿ ಬೊಳಚ (ತಟ್ಟೆಯಲ್ಲಿ ಅಕ್ಕಿ, ದೀಪ) ಬೆಳಗಿ, ರೇಷ್ಮೆ ವಸ್ತ್ರ ಇರಿಸಿ ತರಕಾರಿಯೊಂದರಲ್ಲಿ ತಲೆ ಕೈಕಾಲು ಆಕೃತಿ ರಚಿಸಿ ಹೂವಿನಿಂದ ಸಿಂಗರಿಸಿ ಮಾತೆ ಕಾವೇರಿಯ ಪ್ರತೀಕವೆಂದು ಪೂಜಿಸುತ್ತಾರೆ. ಇದೇ ಕಣಿಪೂಜೆ. ಈ ರೂಪವನ್ನು ನೆಲ್ಲಕ್ಕಿ ನಡುಬಾಡೆ (ನಡುಮನೆ) ಯಲ್ಲಿರಿಸಿ ಕುಟುಂಬದ ಪ್ರತಿಯೊಬ್ಬರೂ ತಳಿಯಕ್ಕಿ ಬೊಳಕ್ನಿಂದ ಅಕ್ಕಿ ತೆಗೆದು ದೀಪಕ್ಕೆ ಪ್ರೋಕ್ಷಿಸಿ ನಮಿಸುತ್ತಾರೆ. ಹಾಗೆಯೇ, ಕಿರಿಯರು ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಬಳಿಕ ಮುತ್ತೈದೆಯರು ಬಾವಿ ಬಳಿ ಗಂಗಾ ಪೂಜೆ ಮಾಡಿ ಮನೆಯಲ್ಲಿ ಸಿದ್ದಪಡಿಸಿದ ದೋಸೆಯನ್ನು ಸಾಂಕೇತಿಕವಾಗಿ ಬಾವಿ ಹತ್ತಿರದ ಹಾಗೂ ಗದ್ದೆಯಲ್ಲಿರುವ ಬೊತ್ ನಲ್ಲಿಡುತ್ತಾರೆ. ನಂತರ, ಬಾವಿಯಿಂದ ಹೊಸ ನೀರು ತಂದು ಅಡುಗೆ ಮಾಡುತ್ತಾರೆ. ಪೂಜಿತ ಕಾವೇರಿ ಮಾತೆಯ ಕಲಾಕೃತಿಯನ್ನು ಒಂದು ವಾರ ಕಾಲ ಶ್ರದ್ದಾಭಕ್ತಿಯಿಂದ ಇರಿಸಿಕೊಂಡು ನದಿ ಅಥವಾ ಹಾಲು ಬರುವ ಮರದ ಬುಡದಲ್ಲಿ ವಿಸರ್ಜಿಸಲಾಗುತ್ತದೆ.