ಮಡಿಕೇರಿ: ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯಗೆ ಬೆದರಿಕೆ ಹಾಕಿ, ₹ 1 ಕೋಟಿಗೆ ಬೇಡಿಕೆಯಿಟ್ಟಿದ್ದ ಆರೋಪಿಯನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ನಿವಾಸಿ, ರೌಡಿ ಶೀಟರ್ ಆನಂದ್ (31) ಬಂಧಿತ ಆರೋಪಿ.
‘ಆರೋಪಿಯು ಆಂಧ್ರಪ್ರದೇಶದ ಗಡಿಯಲ್ಲಿ ಕರೆ ಮಾಡಿದ ಬಳಿಕ, ರೈಲಿನಲ್ಲಿ ಬೆಂಗಳೂರಿಗೆ ವಾಪಸ್ಸಾಗುತ್ತಿರುವ ಮಾಹಿತಿ ತಿಳಿದುಬಂದಿತ್ತು. ಬೆಂಗಳೂರು ರೈಲು ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ಧಾರೆ.
ಜ.5ರಂದು ಸಂಜೆ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಮನೆಯ ಮೇಲೆ ಎ.ಸಿ.ಬಿ ದಾಳಿ ನಡೆಯಲಿದ್ದು, ಅದನ್ನು ತಡೆಯಲು ₹ 1 ಕೋಟಿ ಕೊಡಬೇಕು’ ಎಂದು ಬೆದರಿಕೆಯೊಡ್ಡಿದ ಬಳಿಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿದ್ದಾಪುರ ಠಾಣೆಯ ಪಿಎಸ್ಐ ಮೋಹನ್ ರಾಜ್, ಸಿಬ್ಬಂದಿಯಾದ ವಸಂತ್, ನಾಗರಾಜ್, ನಂದಕುಮಾರ್ ನೇತೃತ್ವದ ಆರು ಮಂದಿಯ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.