ಕುಶಾಲನಗರ: ‘ಡಾ.ಅಂಬೇಡ್ಕರ್ ಭಾವಚಿತ್ರವನ್ನು ಕಚೇರಿಯಲ್ಲಿ ಅಳವಡಿಸದೆ ಅಪಮಾನ ಮಾಡಲಾಗಿದೆ’ ಎಂದು ಆರೋಪಿಸಿ ದಲಿತಪರ ಸಂಘಟನೆಗಳು ಕೂಡಿಗೆ ಗ್ರಾಮ ಪಂಚಾಯಿತಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಕಚೇರಿಯ ಗೋಡೆ ಮೇಲಿದ್ದ ಅಂಬೇಡ್ಕರ್ ಫೋಟೊವನ್ನು ಬಿಚ್ಚಿ ಕಾರ್ಯಕ್ರಮ ಮುಗಿದ ನಂತರ ಮೂಲೆಗೆ ಹಾಕುವ ಮೂಲಕ ಅಂಬೇಡ್ಕರ್ ಫೋಟೊಗೆ ಅಪಮಾನ ಮಾಡಿದ್ದು, ಗ್ರಾ.ಪಂ ಆಡಳಿತ ಮಂಡಳಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರಿಗೆ ಪ್ರತಿಭಟನಕಾರರು ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಲಿತಪರ ಸಂಘಟನೆಗಳ ಮುಖಂಡರಾದ ಸಿದ್ದಪ್ಪ, ಬಿ.ಡಿ.ಅಣ್ಣಯ್ಯ, ಕೆ.ಬಿ.ರಾಜು, ನಾಗರಾಜ್, ಚರಣ್, ಗಣೇಶ್, ಕಿರಣ್ ಇದ್ದರು.