ಮಡಿಕೇರಿ: 2018 ಮತ್ತು 2019ರಲ್ಲಿ ಕಾಫಿ ಬೆಳೆಗಾರರು ಅತಿವೃಷ್ಟಿಯಿಂದ ಅಪಾರ ನಷ್ಟ ಅನುಭವಿಸಿದ್ದರೆ, ಆ ನಂತರ ಈಗ ಅನಾವೃಷ್ಟಿಯಿಂದ ಅಕ್ಷರಶಃ ಕಂಗಾಲಾಗಿದ್ದಾರೆ. ಪ್ರತಿ ವರ್ಷವೂ ಕನಿಷ್ಠ ತಿಂಗಳಿಗೆ ಒಮ್ಮೆಯೋ, ಎರಡು ಬಾರಿಯೋ ಮಳೆ ಜಿಲ್ಲೆಯಲ್ಲಿ ಬರುತ್ತಿತ್ತು. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನವರೆಗೂ ಜೋರು ಮಳೆ ಸುರಿಯುತ್ತಿತ್ತು. ಇದರಿಂದ ಬೇಸಿಗೆ ಬಂದರೂ ಕೆರೆ ಕಟ್ಟೆಗಳು ಒಣಗುತ್ತಿರಲಿಲ್ಲ. ಅಂತರ್ಜಲ ಬರಿದಾಗುತ್ತಿರಲಿಲ್ಲ. ಕಾವೇರಿ ಸೇರಿದಂತೆ ಇತರೆ ನದಿಗಳು, ಹೊಳೆಗಳ ಹರಿವು ನಿಲ್ಲುತ್ತಿರಲಿಲ್ಲ. ಆದರೆ, ಈಗ ಕೆರೆಕಟ್ಟೆಗಳು ಒಣಗಿ, ಅಂತರ್ಜಲ ಬರಿದಾಗುತ್ತಿದ್ದು, ನದಿ, ಹೊಳೆಗಳು ಹರಿವನ್ನು ನಿಲ್ಲಿಸಿವೆ. ಸಣ್ಣದಾಗಿ ಹರಿಯುತ್ತಿದ್ದ ತೋಡುಗಳಲ್ಲೂ ಈಗ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಮೊದಲೇ ತೋಟಗಳ ನಿರ್ವಹಣೆ ದುಬಾರಿಯಾಗಿರುವ ಹೊತ್ತಿನಲ್ಲಿ ಈಗ ಬಂದಿರುವ ಭೀಕರ ಬರದಿಂದ ನಿರ್ವಹಣೆ ಮತ್ತೂ ದುಬಾರಿಯಾಗಿದೆ. ಈಗ ಬೆಳೆಗಾರರ ಸ್ಥಿತಿ ಹೇಗಾಗಿದೆ ಎಂದರೆ, ಉತ್ತಮ ಫಸಲಿಗಾಗಿ ಅಲ್ಲ, ತೋಟದಲ್ಲಿರುವ ಗಿಡಗಳನ್ನು ಉಳಿಸಿಕೊಳ್ಳುವುದಕ್ಕೆ ನೀರು ಹಾಯಿಸುವಂತಾಗಿದೆ. ಇದಕ್ಕೂ ಪರದಾಡುವ ಸನ್ನಿವೇಶ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ.
ಈಗ ನದಿ, ಹೊಳೆಗಳಿಂದ ನೀರು ತೆಗೆಯಬಾರದು ಎಂದು ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬಹುತೇಕ ಎಲ್ಲ ಬೆಳೆಗಾರರೂ ಹೇಳುತ್ತಾರೆ. ವರ್ಷಾನುಗಟ್ಟಲೆ ಜತನದಿಂದ ಕಾಯ್ದುಕೊಂಡ ಕಾಫಿ, ಕಾಳು ಮೆಣಸು ಗಿಡಗಳನ್ನು ಜೀವಂತವಾಗಿ ಉಳಿಸಿಕೊಳ್ಳಲು ನೀರು ಬೇಕೇ ಬೇಕು ಎನ್ನಿಸಿದೆ. ನದಿ, ತೊರೆಗಳಿಂದ ನೀರು ತೆಗೆಯದೇ ಹೋದರೆ ಪರ್ಯಾಯ ಮಾರ್ಗವನ್ನಾದರೂ ತಿಳಿಸಿ ಎಂದು ಕೇಳುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಜಿಲ್ಲಾಡಳಿತವಿರಲಿ, ಕೃಷಿ, ತೋಟಗಾರಿಕಾ ತಜ್ಞರೂ ನಿರುತ್ತರರಾಗಿದ್ದಾರೆ.
ರಾಸಾಯನಿಕ ಗೊಬ್ಬರ, ಕ್ರಿಮಿನಾಶಕಗಳು ಸೇರಿದಂತೆ ಎಲ್ಲದರ ಬೆಲೆ ದುಪ್ಪಟ್ಟಾಗಿದೆ.ಇನ್ನೊಂದೆಡೆ, ಕಾರ್ಮಿಕರ ಕೊರತೆಯಿಂದ ವೇತನವೂ ಹೆಚ್ಚಾಗಿದ್ದು, ಬೆಳೆಗಾರರಿಗೆ ಲಾಭ ನೋಡುವುದೇ ಕಷ್ಟವಾಗಿದೆ. ಗ್ರಾಮೀಣ ಪ್ರದೇಶಕ್ಕೆ ಹೋದಲ್ಲಿ ಸಾಕಷ್ಟು ಕಡೆ ಕಾಫಿ ತೋಟಗಳು ಪಾಳು ಬಿದ್ದಿರುವುದನ್ನು ನೋಡಬಹುದು. ಮತ್ತೊಂದೆಡೆ, ಕಾಫಿಗೆ ಬೆಲೆ ಇದ್ದರೂ ಫಸಲು ಇಲ್ಲ. ಕಾಳುಮೆಣಸು ಫಸಲು ಇದ್ದರೂ ತೂಕ ಇಲ್ಲ ಮತ್ತು ಬೆಲೆಯೂ ಕಡಿಮೆಯಾಗುತ್ತಿದೆ. ಒಟ್ಟಿನಲ್ಲಿ ಕಾಫಿ ಬೆಳೆಗಾರರು ನಿರಂತರ ಒತ್ತಡದಲ್ಲಿಯೆ ಜೀವನ ನಡೆಸುವಂತಾಗಿದೆ.
ಮತ್ತೊಂದೆಡೆ, ಕೃಷಿಕರು ಕಾಡು ಪ್ರಾಣಿಗಳಿಂದ ಫಸಲು ಉಳಿಸಿಕೊಳ್ಳಲು ಇನ್ನಿಲ್ಲದ ಹೋರಾಟ ಮಾಡಬೇಕಾಗಿದೆ. ಅರಣ್ಯದಂಚಿನ ಕೃಷಿ ಜಮೀನು ಮಾತ್ರ ಕಾಡುಪ್ರಾಣಿಗಳ ಹಾವಳಿಗೆ ಸಿಲುಕುತಿದ್ದವು. ಆದರೆ, ಇಂದು ಮನೆ ಬಾಗಿಲಿನ ತನಕ ಪ್ರಾಣಿಗಳು ಬಂದು ತಲುಪಿವೆ. ಕಾಡಾನೆ, ಕಾಡುಹಂದಿ, ಕಾಡೆಮ್ಮೆ, ಜಿಂಕೆ, ಮುಳ್ಳು ಹಂದಿ ಸೇರಿದಂತೆ ಹಲವು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಇವುಗಳೊಂದಿಗೆ ನವಿಲುಗಳ ಸಂಖ್ಯೆ ಮಿತಿಮಿರುತಿದ್ದು ತಮ್ಮ ಜೀವದೊಂದಿಗೆ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ.
ನಿರ್ವಹಣೆ: ಕೆ.ಎಸ್.ಗಿರೀಶ
ಪರ್ಯಾಯ ಬೆಳೆ ಇಲ್ಲಿ ಕಷ್ಟ ಕೊಡಗಿನಲ್ಲಿ ಪರ್ಯಾಯ ಬೆಳೆ ಬೆಳೆಯಲು ಸಾಧ್ಯವಿಲ್ಲ. ನಿರಂತರ ನಷ್ಟ ಅನುಭವಿಸುತ್ತಿರುವ ಹೆಚ್ಚಿನ ಕಾಫಿ ಬೆಳೆಗಾರರು ಕಾಫಿ ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಕೂಡಲೇ ಬೆಳೆಗಾರರ ಪರಿಸ್ಥಿತಿ ಅರಿತು ಸರ್ಕಾರ ನೆರವು ನೀಡಬೇಕು. ಇಲ್ಲಿ ಕಾಫಿ ಕಾಳುಮೆಣಸು ಗಿಡಗಳನ್ನು ಉಳಿಸಿಕೊಳ್ಳಲು ದಾರಿ ತೋರಬೇಕು
-ಮೋಹನ್ ಬೋಪಣ್ಣ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ.
ಸರ್ಕಾರ ಬೆಳೆಗಾರರ ಬೆನ್ನಿಗೆ ನಿಲ್ಲಬೇಕಿದೆ ಅರೇಬಿಕಾ ಕಾಫಿ ಉಳಿಸಿ ಬೆಳೆಸಬೇಕೆಂದರೆ ಅವರ ಬೆನ್ನಿಗೆ ಸರ್ಕಾರ ನಿಲ್ಲಬೇಕಿದೆ. ತಪ್ಪಿದಲ್ಲಿ ಕೆಲವೇ ವರ್ಷಗಳಲ್ಲಿ ಅರೇಬಿಕಾ ಕಾಫಿ ನಾಶವಾಗುವುದರಲ್ಲಿ ಸಂದೇಹವಿಲ್ಲ. ಹೆಚ್ಚಿನ ಖರ್ಚು ಹಾಗೂ ಕೆಲಸ ಬಯಸುವ ಕಾಫಿ ಅದಕ್ಕೆ ಹಾಕಿದ ಬಂಡವಾಳವನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲದಂತಹ ಸ್ಥಿತಿ ಇದೆ
-ಕಿತ್ತೂರು ಲಕ್ಷ್ಮೀಶೆಟ್ಟಿ ಕಾಫಿ ಬೆಳೆಗಾರ.
ಈಗಲಾದರೂ ವೈಜ್ಞಾನಿಕವಾಗಿ ಚೆಕ್ಡ್ಯಾಂ ನಿರ್ಮಿಸಿ ನೀರಿನ ಅಭಾವಕ್ಕೆ ಈಗ ಸಭೆ ನಡೆಸಿ ಅದನ್ನು ಸುಧಾರಿಸುವುದಕ್ಕೆ ಆಗುವುದಿಲ್ಲ. ಕುಡಿಯುವ ನೀರಿಗೆ ಹನಿಗಳ ಲೆಕ್ಕದಲ್ಲಿ ಮಾತ್ರ ಪೂರೈಸುವಂತಹ ಸ್ಥಿತಿ ಇದೆ. ಕಳೆದ ವರ್ಷವಿಡೀ ಪ್ರತಿ ತಿಂಗಳೂ ಮಳೆ ಕಡಿಮೆಯಾಗಿದೆ ಎಂಬ ಮಾಹಿತಿ ಸರ್ಕಾರಕ್ಕೆ ಲಭಿಸುತ್ತಿತ್ತು. ಆದರೆ ಆಗಲೇ ಇವರು ಚೆಕ್ಡ್ಯಾಂ ಕಟ್ಟಿದ್ದರೆ ಇಂದು ನೀರು ಹಿಂಗಿ ಅಂತರ್ಜಲ ಮಟ್ಟ ಏರಿಕೆಯಾಗುತ್ತಿತ್ತು. ಈಗ ಅದು ಯಾವುದನ್ನೂ ಮಾಡದೇ ಇರುವುದರಿಂದಲೇ ಕೊಳವೆಬಾವಿಗಳು ಕೆರೆಕಟ್ಟೆಗಳು ಒಣಗುತ್ತಿವೆ. ಇದು ಜಿಲ್ಲಾಡಳಿತ ಹಾಗೂ ಸರ್ಕಾರದ ವೈಫಲ್ಯ. ಈಗಲಾದರೂ ಎಚ್ಚೆತ್ತುಕೊಂಡು ವೈಜ್ಞಾನಿಕವಾಗಿ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆದು ಚೆಕ್ಡ್ಯಾಂ ಕಟ್ಟಬೇಕು.
- ಮನು ಸೋಮಯ್ಯ ರಾಜ್ಯ ರೈತ ಸಂಘದ ಮೈಸೂರು ವಿಭಾಗೀಯ ಅಧ್ಯಕ್ಷ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.