ನಾಪೋಕ್ಲು: ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವ ಎಮ್ಮೆಮಾಡು ಮಖಾಂ ಉರುಸ್ಗೆ ಕೋಯಿಕೋಡ್ನ ಸಯ್ಯಿದ್ ಮುಹಮ್ಮದ್ ಕೊಯ ತಂಙಳ್ ಜಮಲುಲ್ಲೈಲಿ ಶುಕ್ರವಾರ ಧ್ವಜಾರೋಹಣ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.
ಧ್ವಜಾರೋಹಣಕ್ಕೂ ಮೊದಲು ಸೂಫಿ ಸಯ್ಯಿದ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಎಮ್ಮೆಮಾಡು ಉರುಸ್ ಕಾರ್ಯಕ್ರಮವು ಮಾರ್ಚ್ 5 ವರೆಗೆ ನಡೆಯಲ್ಲಿದ್ದು, ಈ ಬಾರಿ ಸರಳವಾಗಿ ಆಚರಿಸಲು ಸಮಿತಿಯು ನಿರ್ಧರಿಸಿದೆ. ಅಧಿಕ ಸಂಖ್ಯೆಯಲ್ಲಿ ಕೇರಳದಿಂದ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತವು ಕೆಲವು ನಿರ್ಬಂಧಗಳನ್ನು ಹೇರಿದೆ.
‘ಧಾರ್ಮಿಕ ಕಾರ್ಯಕ್ರಮ ಹೊರತು ಪಡಿಸಿ ಎಲ್ಲಾ ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ಸರಳವಾಗಿ ಅಚರಿಸಲಾಗುವುದು’ ಎಂದು ಎಮ್ಮೆಮಾಡು ತಾಜುಲ್ ಮುಸ್ಲಿಂ ಜಮಾಯತ್ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ತಿಳಿಸಿದರು.
ಜಿಲ್ಲಾಕೇಂದ್ರ ಮಡಿಕೇರಿಯಿಂದ 32 ಕಿ.ಮೀ. ದೂರದಲ್ಲಿರುವ ಎಮ್ಮೆಮಾಡು ಗ್ರಾಮವು ಸೂಫಿ ಸಂತರ ಸೇವಾ ಕಾರ್ಯದಿಂದ ಪ್ರಸಿದ್ದಿ ಪಡೆದಿದೆ. ಸೂಫಿ ಶಹೀದ್ ಎಂಬ ಹೆಸರಿನ ದೈವಭಕ್ತ ಸಮಾಧಿ ಹೊಂದಿರುವ ಇಲ್ಲಿನ ದರ್ಗಾ ಶರೀಫ್ನಲ್ಲಿ ಪ್ರತಿ ವರ್ಷ ಉರುಸ್ ನಡೆಯುತ್ತದೆ. ಮಾರ್ಚ್ 1ರ ಸೋಮವಾರ ಸಮ್ಮೇಳನ ಹಾಗೂ ಅನ್ನದಾನ ನಡೆಯಲಿದೆ.
ತಾಜುಲ್ ಮುಸ್ಲಿಂ ಜಮಾಯತ್ ಕಾರ್ಯದರ್ಶಿ ಇಬ್ರಾಹಿಂ ಸಹದಿ, ನಿರ್ದೇಶಕರಾದ ಕೆ.ಎಂ ಹುಸೈನ್ ಶಖಾಫಿ, ಕಾಳೇರ ಅಬ್ದುಲ್ ಖಾದರ್, ಮಾಹಿನ್ ಸಿ.ಎಂ. ಆಶ್ರಫ್ ಸೇರಿದಂತೆ ಭಕ್ತರು, ಗ್ರಾಮಸ್ಥರು ಇದ್ದರು.