ಕುಶಾಲನಗರ: ‘ಜಿಲ್ಲೆಯ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ’ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಸ್ಥಳೀಯ ಪುರಸಭೆ ಸದಸ್ಯ ಶೇಖ್ ಖಲೀಮುಲ್ಲಾ ಅವರ ಅಭಿಮಾನಿ ಬಳಗದಿಂದ ಶನಿವಾರ ಇಂದಿರಾ ಬಡಾವಣೆಯ ದಾರುಲ್ ಉಲುಂ ಮದರಸದಲ್ಲಿ ನಡೆದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಮತದಾರರು, ಕಾರ್ಯಕರ್ತರ ಆಶಯ ಈಡೇರಿಸುವುದು ನನ್ನ ಆದ್ಯ ಕರ್ತವ್ಯ. ಎಲ್ಲರ ನಿರೀಕ್ಷೆ, ಬೇಡಿಕೆಗಳನ್ನು ಈಡೇರಿಸಲು ಮೊದಲ ಆದ್ಯತೆ ನೀಡಲಾಗುತ್ತದೆ. ನಂತರ ದೊರಕುವ ಸನ್ಮಾನ ಮೌಲ್ಯಯುತವಾಗಿರುತ್ತದೆ’ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ‘ಕೊಡಗಿಗೆ ಕಾಲಿಟ್ಟು ಕಾಂಗ್ರೆಸ್ನಲ್ಲಿ ಹೊಸ ಛಾಪು ಮೂಡಿಸಿದ ಪರಿಣಾಮ ಮನೆಮಾತಾಗಿ ಮಂತರ್ ಗೌಡ ಶಾಸಕರಾಗಿ ಗೆಲುವು ಸಾಧಿಸಿದ್ದಾರೆ’ ಎಂದರು.
ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್ ಮಾತನಾಡಿ, ‘25 ವರ್ಷದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರ, ಧಾರ್ಮಿಕ ಅಸಮಾನತೆ ತೊಡೆದುಹಾಕಲು ಪಣತೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ’ ಎಂದರು.
ಹಿರಿಯ ವಕೀಲ, ಮುಖಂಡ ಎಚ್.ಎಸ್.ಚಂದ್ರಮೌಳಿ ಮಾತನಾಡಿ, ‘ಶಾಸಕರ ಗೆಲುವಿನಲ್ಲಿ ಪ್ರತಿಯೊಬ್ಬ ಮುಖಂಡರ ಪಾತ್ರ ಮಹತ್ವದ್ದಾಗಿದೆ‘ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಕೆ.ಪಿ.ಚಂದ್ರಕಲಾ ಮಾತನಾಡಿ, ‘ಇಡೀ ಜಿಲ್ಲೆಯನ್ನು ಸಂಪೂರ್ಣವಾಗಿ ಕಾಂಗ್ರೆಸ್ಮಯವಾಗಿಸುವ ನಿಟ್ಟಿನಲ್ಲಿ ಪಣತೊಡಬೇಕಿದೆ. ಕುಶಾಲನಗರ ಕಾಂಗ್ರೆಸ್ ಇದೀಗ ಸರಿದಾರಿಗೆ ಬಂದಿರುವುದು ಸಮಾಧಾನದ ಸಂಗತಿ’ ಎಂದರು.
ಪುರಸಭೆ ಸದಸ್ಯ ಶೇಖ್ ಖಲೀಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಬೆಂಗಳೂರಿನ ಮುಖಂಡ ರಫೀಕ್, ಧರ್ಮಗುರು ತಮ್ಲಿಖ್ ಧಾರಿಮಿ ಮಾತನಾಡಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಜಿಲ್ಲಾ ಉಪಾಧ್ಯಕ್ಷ ಕಾಂತರಾಜು, ಲೋಕೇಶ್, ಮುಖಂಡರಾದ ಟಿ.ಪಿ.ಹಮೀದ್, ಯಾಕೂಬ್, ಅಬ್ದುಲ್ ಲತೀಫ್, ಕಾರ್ಯಕ್ರಮ ಸಂಘಟಕರಾದ ಶಿವಶಂಕರ್, ಕಿರಣ್, ಆದಂ, ಚಿರು ಸೇರಿದಂತೆ ಪುರಸಭೆ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.