ಕುಶಾಲನಗರ: ಪಟ್ಟಣದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣವನ್ನು ನಿಯಂತ್ರಿಸುವ ಉದ್ದೇಶದಿಂದ ಇಲ್ಲಿನ ಚೇಂಬರ್ ಆಫ್ ಕಾಮರ್ಸ್ ಕರೆ ನೀಡಿದ್ದ ಸ್ವಯಂ ಪ್ರೇರಿತ ಬಂದ್ ಗೆ ಬುಧವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಪಟ್ಟಣದಲ್ಲಿ ಭಾಗಶಃ ಅಂಗಡಿಗಳು ಮುಚ್ಚಿದ್ದವು. ವಾಹನ ಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸಾರ್ವಜನಿಕರ ಓಡಾಟ ಕೂಡ ವಿರಳವಾಗಿತ್ತು.
ಹೋಟೆಲ್ಗಳು, ಆಭರಣ, ಬಟ್ಟೆ, ಮೊಬೈಲ್ ಮಳಿಗೆಗಳು, ಖಾಸಗಿ ಕ್ಲಿನಿಕ್ ಗಳು ಹಾಗೂ ಔಷಧಿ ಅಂಗಡಿಗಳು ಕೂಡ ಮುಚ್ಚಿದ್ದವು.
ಕೆಲವು ವರ್ತಕರು ತಮ್ಮ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಲು ಮುಂದಾದ ಸಂದರ್ಭದಲ್ಲಿಚೇಂಬರ್ ಆಫ್ ಕಾಮರ್ಸ್ ಟಾಸ್ಕ್ ಫೋರ್ಸ್ ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ತರಕಾರಿ ಹಾಗೂ ಮಾಂಸದ ಮಳಿಗೆಗಳು ತೆರೆದಿದ್ದವು. ಆದರೆ ಖರೀದಿಸಲು ಜನರು ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿತು.
‘ಸಾರ್ವಜನಿಕರ ಹಿರದೃಷ್ಟಿಯಿಂದ ಬಂದ್ ಗೆ ಕರೆ ನೀಡಲಾಗಿದೆ. ಸಾರ್ವಜನಿಕರು ಹಾಗೂ ವರ್ತಕರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಆರ್ಥಿಕವಾಗಿ ಹೊರೆಯಿದ್ದರೂ ಮಳಿಗೆಗಳನ್ನು ಮುಚ್ಚಿ ಬಂದ್ ಗೆ ಬೆಂಬಲ ಸೂಚಿಸಿದ ವರ್ತಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ’ ಎಂದು ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಬಿ.ಅಮೃತ್ ರಾಜ್ ಹೇಳಿದರು.