ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗಿನ ಹಲವೆಡೆ ಭಾರಿ ವರ್ಷಧಾರೆ

Published 19 ಮೇ 2024, 6:07 IST
Last Updated 19 ಮೇ 2024, 6:07 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಹಲವೆಡೆ ಶನಿವಾರ ಭಾರಿ ಮಳೆ ಸುರಿದಿದ್ದು, ನದಿ, ತೊರೆಗಳೆಲ್ಲ ಜೀವಕಳೆಯನ್ನು ಪಡೆದಿವೆ. ಗುಡುಗು, ಸಿಡಿಲಿನ ಅಬ್ಬರ ಕೆಲವೆಡೆ ಅಧಿಕವಿತ್ತು. ರಾತ್ರಿಯವರೆಗೂ ಜಿಲ್ಲೆಯ ಅಲ್ಲಲ್ಲಿ ಬಿರುಸಿನಿಂದ ಮಳೆ ಸುರಿಯುತ್ತಲೇ ಇತ್ತು.

ಅತ್ಯಧಿಕ ಮಳೆ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7 ಸೆಂ.ಮೀನಷ್ಟು ಸುರಿದಿದೆ. ಇಲ್ಲಿ ಸಿಡಿಲುಗಳ ಅಬ್ಬರ ತುಸು ಹೆಚ್ಚಾಗಿಯೇ ಇತ್ತು. ಕೇರಳ ಗಡಿ ಭಾಗ ಕುಟ್ಟದಲ್ಲಿ 4 ಸೆಂ.ಮೀನಷ್ಟು ಭಾರಿ ಮಳೆ ಸುರಿದಿದೆ. ಉಳಿದಂತೆ, ಕೆದಕಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3, ನಂಜರಾಯಪಟ್ಟಣ ವ್ಯಾಪ್ತಿಯಲ್ಲಿ 2.5 ಹಾಗೂ ಹಾನಗಲ್‌ ವ್ಯಾಪ್ತಿಯಲ್ಲಿ 2 ಸೆಂ.ಮೀನಷ್ಟು ಮಳೆಯಾಗಿದೆ.

ಮಡಿಕೇರಿ ನಗರದಲ್ಲಿ ಶನಿವಾರ ಮಧ್ಯಾಹ್ನ ಬಿರುಸಿನ ಮಳೆಗೆ ರಸ್ತೆಗಳಲ್ಲಿ ನೀರು ರಭಸವಾಗಿ ಹರಿಯಿತು. ರಾಜಕಾಲುವೆಗಳು ಕಟ್ಟಿಕೊಂಡ ಪರಿಣಾಮ ನೀರು ರಸ್ತೆಗೆ ಬಂದಿತು. ಒಮ್ಮೆಗೆ ಹೆಚ್ಚಾಗಿ ಸುರಿದ ಮಳೆಯ ನೀರು ಚರಂಡಿಗಳಲ್ಲಿ ತುಂಬಿ ಹೋಗಿದ್ದ ಹೂಳಿನಿಂದ ಹಾಗೂ ಗಿಡಗಂಟಿಗಳಿಂದ ಸರಾಗವಾಗಿ ಹರಿಯಲು ಸಾಧ್ಯವಾಗದೇ ಹಲವು ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಂತಿತ್ತು. ಇದರಿಂದ ಪಾದಾಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಪರದಾಡಿದರು.

ಕನ್ನಿಕಾ ಬಡಾವಣೆ ಸಮೀಪ ರಸ್ತೆಯ ಒಂದು ಬದಿಯ ಮಣ್ಣು ರಾಜಕಾಲುವೆ ಭಾಗಕ್ಕೆ ಕುಸಿದು ಬಿದ್ದಿತು. ಜಿಲ್ಲಾಸ್ಪತ್ರೆ ಹಿಂಭಾಗ ಇದ್ದ ಕಸ, ಕಡ್ಡಿಗಳೆಲ್ಲ ಕೊಚ್ಚಿಕೊಂಡು ರಸ್ತೆ ಬಂದಿತು. ರಭಸವಾಗಿ ಬೀಳುತ್ತಿದ್ದ ಮಳೆಯಿಂದ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತು.

ನಿರಂತರವಾಗಿ ಧೋ ಎಂದು ಮಳೆ ಸುರಿದ ನಗರದಲ್ಲಿ ಶೀತಮಯ ವಾತಾವರಣ ಮೂಡಿತು. ಮೂಲೆಯಲ್ಲಿದ್ದ ಸ್ವೆಟರ್‌ಗಳನ್ನು ಹುಡುಕುವಷ್ಟು ತಣ್ಣನೆಯ ವಾತಾವರಣ ಸೃಷ್ಟಿಯಾಯಿತು. ಶನಿವಾರ ಸುರಿದ ಮಳೆ ಮುಂಗಾರು ಮಳೆಯ ನೆನಪನ್ನು ತಂದಿತು.

ಭಾನುವಾರವೂ ಕೊಡಗು ಜಿಲ್ಲೆಯ ಅಲ್ಲಲ್ಲಿ ರಭಸವಾಗಿ ಗುಡುಗು, ಸಿಡಿಲಿನಿಂದ ಕೂಡಿದ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ಮಡಿಕೇರಿ ನಗರದ ಓಂಕಾರೇಶ್ವರ ದೇವಸ್ಥಾನದ ಸಮೀಪದ ರಸ್ತೆಯಲ್ಲಿ ಶನಿವಾರ ಸುರಿದ ಭಾರಿ ಮಳೆಯಲ್ಲಿ ಮಹಿಳೆಯೊಬ್ಬರು ಕೊಡೆ ಹಿಡಿದು ಹೆಜ್ಜೆ ಹಾಕಿದರು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ ನಗರದ ಓಂಕಾರೇಶ್ವರ ದೇವಸ್ಥಾನದ ಸಮೀಪದ ರಸ್ತೆಯಲ್ಲಿ ಶನಿವಾರ ಸುರಿದ ಭಾರಿ ಮಳೆಯಲ್ಲಿ ಮಹಿಳೆಯೊಬ್ಬರು ಕೊಡೆ ಹಿಡಿದು ಹೆಜ್ಜೆ ಹಾಕಿದರು ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ ನಗರದ ಓಂಕಾರೇಶ್ವರ ದೇಗುಲ ಸಮೀಪ ಶನಿವಾರ ಮಳೆ ನೀರು ಹೆಚ್ಚು ರಭಸದಿಂದ ಹರಿಯಿತು. ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ ನಗರದ ಓಂಕಾರೇಶ್ವರ ದೇಗುಲ ಸಮೀಪ ಶನಿವಾರ ಮಳೆ ನೀರು ಹೆಚ್ಚು ರಭಸದಿಂದ ಹರಿಯಿತು. ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಇದ್ದಕ್ಕಿದ್ದಂತೆ ಬಂದ ಮಳೆ ತಾಸುಗಟ್ಟಲೆ ಸುರಿಯಿತು ರಭಸದ ಮಳೆಗೆ ಕೆಲಕಾಲ ಜನಜೀವನ ಅಸ್ತವ್ಯಸ್ತ ಇಂದೂ ಮಳೆ ಮುಂದುವರಿಯುವ ಮುನ್ಸೂಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT