ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿ, ನಾಪೋಕ್ಲು, ಭಾಗಮಂಡಲ, ಕಕ್ಕಬ್ಬೆ ಭಾಗದಲ್ಲಿ ಮಂಗಳವಾರವೂ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು.
ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಸಂಜೆ 4ರಿಂದ ಒಂದು ತಾಸು ಗುಡುಗು, ಮಿಂಚಿನೊಂದಿಗೆ ಮಳೆ ಆರ್ಭಟಿಸಿತು. ರಸ್ತೆಗಳು ಹಳ್ಳದಂತೆ ಗೋಚರಿಸಿದವು. ಮಳೆಯೊಂದಿಗೆ ರಾಶಿ ರಾಶಿ ಆಲಿಕಲ್ಲು ಸುರಿಯಿತು. ನಾಲ್ಕು ದಿನಗಳಿಂದ ಪ್ರತಿನಿತ್ಯ ಸಂಜೆ ಮಳೆಯಾಗುತ್ತಿದ್ದು, ಇಳೆ ತಂಪಾಗಿದೆ.
ಭಾರೀ ಗಾಳಿಗೆ ಸುಂಟಿಕೊಪ್ಪ– ಮಾದಾಪುರ ರಸ್ತೆಯಲ್ಲಿ ಮರ ಬಿದ್ದು ಒಂದು ಗಂಟೆ ವಾಹನ ಸಂಚಾರ ಬಂದ್ ಆಗಿತ್ತು. ಕುಶಾಲನಗರ, 7ನೇ ಹೊಸಕೋಟೆ, ದುಬಾರೆ, ಚಿಕ್ಲಿಹೊಳೆಯಲ್ಲಿ ಸಾಧಾರಣೆ ಮಳೆಯಾಗಿದೆ.
‘ಏಪ್ರಿಲ್ನಲ್ಲಿ ಮಳೆ ಬಿದ್ದಷ್ಟು ಕಾಫಿ ಬೆಳೆಗೆ ಅನುಕೂಲ. ಆದರೆ, ಆಲಿಕಲ್ಲು ಸುರಿಯಬಾರದು. ಆಲಿಕಲ್ಲಿನಿಂದ ಕಾಫಿ ಹಾಗೂ ಕಾಳುಮೆಣಸಿಗೆ ಕೊಳೆರೋಗ ತಗಲುವ ಸಾಧ್ಯತೆಯಿದೆ. ಜತೆಗೆ, ಮುಂದಿನ ವರ್ಷದ ಫಸಲಿನ ಮೇಲೂ ಪರಿಣಾಮ ಬೀರಲಿದೆ’ ಎಂದು ಬೆಳೆಗಾರರು ಅಭಿಪ್ರಾಯಪಟ್ಟಿದ್ದಾರೆ.