ಕುಶಾಲನಗರ: ಸುತ್ತಮುತ್ತಲ ಗ್ರಾಮಗಳ ರೈತರ ಜಮೀನಿಗೆ ನೀರುಣಿಸುತ್ತಿದ್ದ ದೊಡ್ಡಕೆರೆ ಬತ್ತಿಹೋಗಿದೆ.
ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೆರೆ ಎಂದೇ ಪ್ರಸಿದ್ದಿ ಪಡೆದಿರುವ ಈ ಕೆರೆ ಹೂಳು ತುಂಬಿ ಕೆರೆಯ ಸುತ್ತ ಪೊದೆ ಅವರಿಸಿಕೊಂಡಿದೆ. ಕೆರೆಯಲ್ಲಿ ಜಲ ಬತ್ತಿ ಸುತ್ತಮುತ್ತಲಿನ ರೈತರ ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದಂತೆ ಆಗಿದೆ. ಕೆರೆ ತುಂಬ ಹೂಳು ತುಂಬಿದ್ದು, ಗ್ರಾಮ ಪಂಚಾಯಿತಿ ವತಿಯಿಂದಲೂ ಈ ಕೆರೆಯ ಹೂಳು ತೆಗೆಯುತ್ತಿಲ್ಲ. ರೈತರು ಸ್ವಂತ ಖರ್ಚಿನಲ್ಲಿ ನಾವೇ ಊಳು ತೆಗಿತೀವಿ ಎಂದರೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒ ಸಹಕಾರ ನೀಡದೆ ಅಡ್ಡಿಪಡಿಸುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಕೆರೆ ಹೂಳು ತೆಗೆದು ಅಭಿವೃದ್ಧಿಪಡಿಸುತ್ತೇವೆ ಎಂದು ಮುಂದಾದರೆ ಇದಕ್ಕೂ ಅಸ್ಪದ ನೀಡದೆ ಹೂಳು ತೆಗೆಯುವ ಜೆಸಿಬಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ ಎಂದು ಅಧ್ಯಕ್ಷೆ ಮೀನಾಕುಮಾರಿ ಉಡಾಫೆಯಿಂದ ಮಾತನಾಡುತ್ತಾರೆ ಎಂದು ಹೆಬ್ಬಾಲೆ ನೀರು ಬಳಕೆದಾರರ ಸಂಘದ ನಿರ್ದೇಶಕ ಮಧುಸೂಧನ್ ದೂರಿದರು.
ಈ ದೊಡ್ಡ ಅಕೆರೆಯಲ್ಲಿ ಹಿಂದೆ ವರ್ಷ ಪೂರ್ತಿ ನೀರು ತುಂಬಿರುತ್ತಿತ್ತು. ರೈತರ ಜಮೀನಿಗೆ, ಜಾನುವಾರುಗಳಿಗೆ ಹಾಗೂ ಪಕ್ಷಿ– ಪ್ರಾಣಿಗಳಿಗೆ ಜೀವಸಲೆಯಾಗಿತ್ತು. ಕೆರೆ ಹೂಳು ತೆಗೆಯದ ಹಿನ್ನೆಲೆಯಲ್ಲಿ ಇದೀಗ ದೊಡ್ಡ ಕೆರೆ ಹೋಗಿ ಸಣ್ಣಕೆರೆಯಾಗಿ ಮಾರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಈ ಕೆರೆಯನ್ನು ಅಭಿವೃದ್ಧಿಪಡಿಸಲು ಪಂಚಾಯಿತಿ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ ರೈತರಿಗೆ ಹೂಳು ತೆಗೆದು ಅಭಿವೃದ್ಧಿ ಪಡಿಸಲು ಅವಕಾಶ ಮಾಡಿಕೊಡಬೇಕು ಎಂದು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಧುಸೂದನ್ ಎಚ್ಚರಿಕೆ ನೀಡಿದರು.
ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಹದೇವ್, ವಿದ್ಯಾವರ್ಧಕ ಸಂಘದ ನಿರ್ದೇಶಕ ಮಂಜುನಾಥ್, ಗ್ರಾಮದ ರೈತರಾದ ಆನಂದ,ರಾಜು, ತನು ಕುಮಾರ್, ಹಾಗೂ ಗ್ರಾಮಸ್ಥರು ಇದ್ದರು.