ಗೋಣಿಕೊಪ್ಪಲು: ಸಂಭ್ರಮದ ಹುತ್ತರಿ ಹಬ್ಬವನ್ನು ಕೆಲವೆಡೆ ಸಡಗರದಿಂದ ಆಚರಿಸಲಾಯಿತು.
ಬುಧವಾರ ಮುಂಜಾನೆ ಸ್ನಾನ, ಸಂಧ್ಯಾವಂದನೆ ಗೈದರು. ಬಳಿಕ 'ಪೊಲಿ ಪೊಲಿ ದೇವಾ' ಎಂದು ಕೂಗುತ್ತಾ ಪೂಜಾ ಸಾಮಗ್ರಿಗಳನ್ನು ತಟ್ಟೆಯಲ್ಲಿಟ್ಟು ಗದ್ದೆ ಕಡೆಗೆ ಸಾಗಿದಿರು.
ಭತ್ತದ ಕದಿರು ತೆಗೆಯುವ ಗದ್ದೆ ಬದುವಿನಲ್ಲಿ ಮಾವಿನ ಎಲೆಗಳ ತೋರಣ ಕಟ್ಟಲಾಗಿತ್ತು. ಹಾಲು, ಜೇನುತುಪ್ಪವನ್ನು ಭತ್ತದ ಕದಿರಿನ ಬುಡಕ್ಕೆ ಸುರಿದು ಅಭಿಷೇಕ ಮಾಡಿದರು. ಅರಿಸಿನ ಕುಂಕಮ ಹಚ್ಚಿ, ದೀಪ ಬೆಳಗಿಸಿ ಗಂಧದ ಕಡ್ಡಿಯಿಂದ ಕದಿರಿನ ಬುಡ ಪೂಜಿಸಿದರು. ಬಳಿಕ ಮನಯ ಯಜಮಾನ ಭತ್ತದ ಬದುವಿನಲ್ಲಿ ನಿಂತು ಆಕಾಶದ ಕಡೆಗೆ ಗಾಳಿಯಲ್ಲಿ ಗುಂಡು ಹಾರಿಸಿದರು. ಬಳಿಕ ಭತ್ತದ ಕದಿರು ಕೊಯ್ದು ದಡದಲ್ಲಿದ್ದ ಎಲ್ಲರೂ 'ಪೊಲಿ ಪೊಲಿ ದೇವಾ' ಎಂದು ಸ್ಮರಣೆ ಮಾಡುತ್ತಾ ಗದ್ದೆಯಿಂದ ಮೇಲೆ ಬಂದರು.
ಬಳಿಕ ಕದಿರನ್ನು ಕೈ ಯಲ್ಲಿ ಹಿಡಿದು ಮನೆಯತ್ತ ಸಾಗಿದರು. ಮನೆಯಲ್ಲಿ ತೂಕ್ ಬೊಳಕ್ ಬಳಿ ಇಟ್ಟು ದೇವರಿಗೆ ಭಕ್ತಿ ಪೂರ್ವಕವಾಗಿ ಕೈ ಮುಗಿದರು. ಆನಂತರ ಹೊಸ ಅಕ್ಕಿಯಿಂದ ಮಾಡಿದ ಪಾಯಸ, ಹುತ್ತರಿ ತೊಂಬಿಟ್ಟು ತಿಂದು ಸಂಭ್ರಮಿಸಿದರು.
ಪೊನ್ನಂಪೇಟೆ ಬಳಿಯ ಬೇಗೂರಿನಲ್ಲಿ ಅಲ್ಲಿನ ಪೂಳೆಮಾಡ ದೇವಸ್ಥಾನದಲ್ಲಿ ಊರಿನವರೆಲ್ಲ ಶ್ರದ್ಧಾಭಕ್ತಿಯಿಂದ ಕದಿರು ತೆಗೆಯುವ ಮೂಲಕ ಹಬ್ಬ ಆಚರಿಸಿದರು.
ನಲ್ಲೂರಿನಲ್ಲಿ ಪುಳ್ಳಂಗಡ ಕುಟುಂಬಸ್ಥರು ಒಂದೆಡೆ ಸೇರಿ ದೇವರ ಕದಿರು ತೆಗೆದರು. ಕಿರುಗೂರಿನಲ್ಲಿಯೂ ಗ್ರಾಮದ ಮುಖಂಡ ಚೆಪ್ಪುಡೀರ ಪೊನ್ನಪ್ಪ ನೇತೃದಲ್ಲಿ ಕದಿರು ತೆಗೆಯಲಾಯಿತು. ಬಳಿಕ ಅಲ್ಲಿನ ಮತ್ತೂರು ಈಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಚಿಕ್ಕಮಂಡೂರಿನಲ್ಲಿ ಐನಂಡ ಕುಟುಂಬಸ್ಥರು ಒಂದೆಡೆ ಸೇರಿ ನಿವೃತ್ತ ಸೇನಾಧಕಾರಿ ಐನಂಡ ಮಂದಣ್ಣ ಅವರ ನೇತೃತ್ವದಲ್ಲಿ ಕದಿರು ತೆಗೆದರು. ಕುಟುಂಬದ ಸದಸ್ಯರಾದ ಐನಂಡ ತಮ್ಮಯ್ಯ, ಐನಂಡ ಬೋಪಣ್ಣ, ಐನಂಡ ಭಾರತಿ ಮೊದಲಾದವರು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.