ಮಡಿಕೇರಿ: ‘ನಾನು ಬಿಜೆಪಿಗೆ ಹೊಸಬನಲ್ಲ. 10ನೇ ವಯಸ್ಸಿನಿಂದಲೇ ನಾನು ಸ್ವಯಂಸೇವಕ. ಆದರೆ, ನಾನು ಬಿಜೆಪಿಗೆ ಹೊಸಬ ಎಂಬ ಅಪಪ್ರಚಾರ ನಡೆಯುತ್ತಿದೆ’ ಎಂದು ನೈರುತ್ಯ ಪದವೀಧರ ಕ್ಷೇತದ ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ನಾನು ಸಂಘ ವಿರೋಧಿ ಕೆಲಸ ಮಾಡಿದ್ದೇನೆ ಎಂದು ರಘುಪತಿ ಭಟ್ ಹೇಳಿದ್ದಾರೆ. ನನ್ನ ಬಗ್ಗೆ ಹೇಳಲು ಬೇರೆ ಏನು ಇಲ್ಲದೇ ಇರುವುದರಿಂದ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.
‘ರಘುಪತಿ ಭಟ್ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಬಗೆ ನಮಗೆ ಬಹಳ ಗೌರವವಿದೆ. ಆದರೆ, ಉಡುಪಿಗೆ ಹೋಗಿ ಅವರ ಮನೆಯ ಮುಂದೆ ಹೋದರೆ ಸೌಜನ್ಯಕ್ಕೂ ಮನೆಯ ಒಳಗೆ ಕರೆಯಲಿಲ್ಲ. ಅವರಿಗೆ ಬಿಜೆಪಿ ಮೂರು ಬಾರಿ ಎಂಎಲ್ಎ ಸ್ಥಾನಕ್ಕೆ ಟಿಕೆಟ್ ನೀಡಿತ್ತು ಎಂಬುದನ್ನು ಅವರು ಮರೆಯಬಾರದು’ ಎಂದರು.
‘ನನಗೆ ಕಾಂಗ್ರೆಸ್ನಿಂದ ಟಿಕೆಟ್ ನೀಡುವ ಕುರಿತು ಆಮಿಷ ಬಂದಿತ್ತು. ಆದರೆ, ನಾನು ಆರ್ಎಸ್ಎಸ್ ಕಾರ್ಯಕರ್ತನಾಗಿರುವ ಕಾರಣ ನಾನು ಒಪ್ಪಲಿಲ್ಲ. ಬಿಜೆಪಿ ಹಿರಿಯರು ಟಿಕೆಟ್ ನೀಡಿದ್ದಾರೆ’ ಎಂದು ಹೇಳಿದರು.