ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ದಸರಾ ಉತ್ಸವದಲ್ಲಿ ಭಾನುವಾರ ಜಾನಪದ ದಸರಾ ಆರಂಭಗೊಂಡಿತು.
ಮಡಿಕೇರಿ ನಗರ ದಸರಾ ಸಮಿತಿ, ಕೊಡಗು ಜಿಲ್ಲಾ ಜಾನಪದ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಏರ್ಪಡಿಸಿರುವ ಜಾನಪದ ದಸರಾವನ್ನು ಜಾನಪದ ವಿದ್ವಾಂಸರಾದ ಹಿ.ಶಿ.ರಾಮಚಂದ್ರೇಗೌಡ ಉದ್ಘಾಟಿಸಿದರು.
ಇದಕ್ಕೂ ಮುನ್ನ ಮಹಾತ್ಮ ಗಾಂಧಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಜನಪದ ಕಲಾತಂಡಗಳ ಮೆರವಣಿಗೆ ನಡೆಯಿತು. ಜತೆಗೆ, ಕೊಡಗಿನಲ್ಲಿ ಬಳಕೆಯಲ್ಲಿದ್ದ ಜನಪದ ವಸ್ತುಗಳ ಪ್ರದರ್ಶನವೂ ಉದ್ಘಾಟನೆಗೊಂಡಿತು.