ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶೇಷ ಕಿಟ್‌’ಗೆ ಮುಗಿಬಿದ್ದ ಜನರು

ಅನ್ನಭಾಗ್ಯ ಯೋಜನೆಯ ವಿಶೇಷ ಕಿಟ್‌ ವಿತರಣೆ
Last Updated 5 ಸೆಪ್ಟೆಂಬರ್ 2018, 13:00 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ನಗರಸಭೆ ಕಚೇರಿಗೆ ಬುಧವಾರ ಬಂದಿದ್ದ ಅನ್ನಭಾಗ್ಯ ಯೋಜನೆಯ ವಿಶೇಷ ಕಿಟ್‌ ಪಡೆಯಲು ಜನರು ಮುಗಿಬಿದ್ದ ದೃಶ್ಯ ಕಂಡುಬಂತು.

ಬೆಳಿಗ್ಗೆ 10ರಿಂದ ಸಂಜೆ 4ರವರೆಗೂ ಜನರ ಸಾಲು ಕರಗಲಿಲ್ಲ. ಲಾರಿಗಳಲ್ಲಿ 9 ಸಾವಿರ ವಿಶೇಷ ಕಿಟ್‌ಗಳು ನಗರಕ್ಕೆ ಬಂದಿದ್ದವು.

ಕಿಟ್‌ನಲ್ಲಿ 10 ಕೆ.ಜಿ. ಅಕ್ಕಿ, ತಲಾ 1 ಕೆ.ಜಿ. ಉಪ್ಪು, ತಾಳೆ ಎಣ್ಣೆ, ಸಕ್ಕರೆ ನೀಡಲಾಯಿತು. ಕಿಟ್ ವಿತರಣೆ ಮಾಹಿತಿ ತಿಳಿದು, ನಗರ ವ್ಯಾಪ್ತಿಯ ಬಿಪಿಎಲ್ ಹಾಗೂ ಎಪಿಎಲ್‌ ಕಾರ್ಡ್‌ದಾರರು ಬಂದಿದ್ದರು. ಸರದಿಯಲ್ಲಿ ಕೆಲವರು ಕಿಟ್‌ ಪಡೆದುಕೊಳ್ಳಲು ಯಶಸ್ವಿಯಾದರು. ಮತ್ತೆ ಕೆಲವರು ಬರಿಗೈಯಲ್ಲಿ ವಾಪಸ್‌ ಆದರು. ಜನರ ಸಾಲು ಕಟ್ಟಡವನ್ನೇ ಸುತ್ತುವರಿದಿತ್ತು. ನೂಕುನುಗ್ಗಲು ಉಂಟಾಯಿತು.

ಮಹಾಮಳೆಯಿಂದ ಕೆಲಸ ಸ್ಥಗಿತಗೊಂಡಿದ್ದು ಸಂತ್ರಸ್ತರಿಗೆ ವಿಶೇಷ ಕಿಟ್‌ ಅನ್ನು ಸರ್ಕಾರ ವಿತರಣೆ ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗಳ ಮೂಲಕ ವಿತರಣೆ ಮಾಡಿದರೆ, ನಗರದಲ್ಲಿ ನಗರಸಭೆಯಿಂದ ವಿತರಿಸಲಾಗುತ್ತಿದೆ.

‘ಬೆಳಿಗ್ಗಿನಿಂದ ಸರದಿಯಲ್ಲಿ ನಿಂತಿದ್ದೇವೆ. ಮಧ್ಯಾಹ್ನ ಕಳೆದರೂ ಆಹಾರ ಸಾಮಗ್ರಿ ಇನ್ನೂ ಕೈಸೇರಿಲ್ಲ. ಕಾದು ಕಾದು ಸುಸ್ತಾಗಿದೆ. ಪ್ರತ್ಯೇಕ ಕೌಂಟರ್‌ ತೆರೆದು ಸಾಮಗ್ರಿ ವಿತರಣೆ ಮಾಡಬೇಕಿತ್ತು’ ಎಂದು ಸಾರ್ವಜನಿಕರು ಆಗ್ರಹಿಸಿದರು.

ಪುಟ್ಟ ಮಕ್ಕಳನ್ನು ಹಿಡಿದುಕೊಂಡು ತಾಯಂದಿರು ಬಂದಿದ್ದರೆ, ವೃದ್ಧರಿಗೆ ಸರದಿಯಲ್ಲಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಜನರನ್ನು ನಿಯಂತ್ರಿಸಲು ಪೊಲೀಸರೂ ಹರಸಾಹಸಪಡಬೇಕಾಯಿತು.

‘ನಗರಸಭೆ ಸಿಬ್ಬಂದಿ ಸೂಕ್ತ ವ್ಯವಸ್ಥೆ ಮಾಡಿಲ್ಲ. ಸರ್ಕಾರ ಕಿಟ್‌ ನೀಡಿದ್ದರೂ ಸದಸ್ಯರು ಹಾಗೂ ಸಿಬ್ಬಂದಿ ಸಮನ್ವಯತೆ ಕೊರತೆಯಿಂದ ಕಿಟ್‌ ದೊರೆಯುತ್ತಿಲ್ಲ’ ಎಂದು ಮಡಿಕೇರಿ ನಿವಾಸಿ ರಮೇಶ್ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT