ಗೋಣಿಕೊಪ್ಪಲು: ಪ್ರಾಣಿ, ಪಕ್ಷಿ ಹಾಗೂ ಗಿಡಮರಗಳಿಂದ ಮಣ್ಣು ಫಲವತ್ತತೆ ಹೊಂದುತ್ತದೆ. ಗಿಡಮರಗಳನ್ನು ಬೆಳೆಸುವ ಮೂಲಕ ಪ್ರಾಣಿ ಪಕ್ಷಿಗಳ ಸಂಕುಲ ಉಳಿಸಬೇಕು ಎಂದು ಇಲ್ಲಿನ ಅನುದಾನಿತ ಪ್ರೌಢಶಾಲೆ ಶಿಕ್ಷಕ ಕೃಷ್ಣ ಚೈತನ್ಯ ಹೇಳಿದರು.
ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಸಹಯೋಗದಲ್ಲಿ ಗುರುವಾರ ನಡೆದ ವಿಶ್ವಮಣ್ಣು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಣ್ಣಿನ ಸಂರಕ್ಷಣೆಯಿಂದ ಗುಣಮಟ್ಟದ ಆಹಾರ ಉತ್ಪಾದನೆ ಸಾಧ್ಯ. ಜತೆಗೆ ಉತ್ತಮ ಇಳುವರಿಯನ್ನೂ ಕಾಣಬಹುದು. ಮಣ್ಣಿನ ಸಂರಕ್ಷಣೆ ಈ ಹೊತ್ತಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ ಎಂದು ನುಡಿದರು.
ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ ಲಿಮಿಟೆಡ್ ನ ಡೆಪ್ಯುಟಿ ಮ್ಯಾನೇಜರ್ ಮೃತ್ಯಂಜಯ್ಯ ಮಾತನಾಡಿ, ಬೆಳೆ ಬೆಳೆಯುವ ಮೊದಲು ಮಣ್ಣು ಪರೀಕ್ಷೆ ನಡೆಸವುದು ಕಡ್ಡಾಯವಾಗಬೇಕು. ಬಳಿಕ ಯಾವ ಪ್ರಮಾಣದಲ್ಲಿ ಗೊಬ್ಬರ ಬಳಸಬೇಕು ಎಂಬುದನ್ನು ತಿಳಿದು ಗೊಬ್ಬರ ಬಳಕೆಗೆ ಮುಂದಾಗಬೇಕು ಎಂದು ತಿಳಿಸಿದರು.
ಕೃಷಿ ಅಧಿಕಾರಿ ಲೆವಿನ್ ಮಾದಪ್ಪ ಪ್ರಾತ್ಯಕ್ಷಿಕೆ ಮೂಲಕ ಮಣ್ಣಿನ ಫಲವತ್ತತೆ ಹಾಗೂ ಭತ್ತದ ಕೃಷಿಯಲ್ಲಿನ ಇಳುವರಿ ಬಗ್ಗೆ ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸಾಜು ಜಾರ್ಜ್ ಹಾಜರಿದ್ದರು. ಕೇಂದ್ರದ ವಿಷಯ ತಜ್ಷರಾದ ಡಾ.ಪ್ರಭಾಕರ್,ಡಾ.ಸೋಮಶೇಖರ್ ಕಾರ್ಯಕ್ರಮ ಆಯೋಜಿಸಿದ್ದರು.