40 ದಿನಗಳಲ್ಲಿ 15 ಸಾವಿರ ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಕಳೆದ 40 ದಿನಗಳಲ್ಲಿ ಸಾಕು ನಾಯಿಗಳೂ ಸೇರಿದಂತೆ ಒಟ್ಟು 15 ಸಾವಿರ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಿದೆ. ವಿಶ್ವ ರೇಬಿಸ್ ದಿನದಂದು ಆರಂಭವಾಗಿರುವ ಈ ಅಭಿಯಾನವು ನಿರಂತರವಾಗಿ ಮುಂದುವರಿಯಲಿದೆ. ಒಟ್ಟು ಕೊಡಗು ಜಿಲ್ಲೆಯಲ್ಲಿ 42 ಸಾವಿರ ನಾಯಿಗಳಿವೆ. ಇಷ್ಟೂ ನಾಯಿಗಳಿಗೂ ರೇಬಿಸ್ ನಿರೋಧಕ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ. ಈ ಲಸಿಕೆಯನ್ನು ಪ್ರತಿ ವರ್ಷ ಹಾಕಿಸಬೇಕು. ಇನ್ನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಇಲಾಖೆ ವತಿಯಿಂದ ವೈದ್ಯರ ನಿಯೋಜನೆ ರೇಬಿಸ್ ನಿರೋಧಕ ಲಸಿಕೆ ನೀಡಿದೆ ಸೇರಿದಂತೆ ಅಗತ್ಯ ಸಹಕಾರ ನೀಡುತ್ತೇವೆ.ಡಾ.ಲಿಂಗರಾಜ ದೊಡ್ಡಮನಿ ಉಪನಿರ್ದೇಶಕರು ಪಶುಪಾಲನಾ ಪಶು ವೈದ್ಯಕೀಯ ಸೇವಾ ಇಲಾಖೆ.
ಒಂದೂವರೆ ತಿಂಗಳಿಂದ ನಾಯಿಕಡಿತ: ಹೆಚ್ಚಳ ಕಳೆದ ಒಂದೂವರೆ ತಿಂಗಳಿನಿಂದ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಮುಂಚೆ ದಿನಕ್ಕೆ 8–10 ಮಂದಿ ರೇಬಿಸ್ ರೋಗ ನಿರೋಧಕ ಲಸಿಕೆ ಪಡೆಯಲು ಬರುತ್ತಿದ್ದರು. ಒಂದೂವರೆ ತಿಂಗಳಿನಿಂದ ಈಚೆಗೆ ದಿನಕ್ಕೆ 12ರಿಂದ 14 ಮಂದಿ ರೇಬಿಸ್ ರೋಗ ನಿರೋಧಕ ಲಸಿಕೆ ಪಡೆಯುತ್ತಿದ್ದಾರೆ. ಕೆಲವೊಂದು ದಿನಗಳಲ್ಲಿ ಇವರ ಸಂಖ್ಯೆ ದಿನಕ್ಕೆ 16ನ್ನೂ ಮುಟ್ಟಿದೆ. ಬಂದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುತ್ತಿದ್ದೇವೆ.ಡಾ.ಕೆ.ಕೃತಿಕಾ ರೇಬಿಸ್ ನೋಡಲ್ ಅಧಿಕಾರಿ.
ಟೆಂಡರ್ ಕರೆದರೂ ಯಾರೂ ಬಂದಿಲ್ಲ; ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಸಾಕಷ್ಟು ಬಾರಿ ಟೆಂಡರ್ ಕರೆದಿದ್ದೇವೆ. ಆದರೂ ಯಾವುದೇ ಅರ್ಹ ಸಂಸ್ಥೆ ಟೆಂಡರ್ ಪಡೆಯಲಿಲ್ಲ. ಕೊಡಗು ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಲು ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ಆಸಕ್ತಿ ತೋರುತ್ತಿಲ್ಲ. ಸರ್ಕಾರ ಒಂದು ನಾಯಿಗೆ ಕೊಡುವ ₹ 1650ಕ್ಕೆ ಇನ್ನಷ್ಟು ಹಣ ಸೇರಿಸಿ ಕೊಡುತ್ತೇವೆ.ಎಚ್.ಆರ್.ರಮೇಶ್ ಮಡಿಕೇರಿ ನಗರಸಭೆಯ ಪೌರಾಯುಕ್ತ.
ಬೀದಿನಾಯಿಗಳನ್ನು ನಿಯಂತ್ರಿಸಲೇಬೇಕು: ಬೀದಿನಾಯಿಗಳ ನಿಯಂತ್ರಣ ಮಾಡಲೇಬೇಕು. ಈಗ ಹೆಚ್ಚುತ್ತಿರುವ ಅವುಗಳ ಸಂಖ್ಯೆ ನೋಡಿದರೆ ನಿಜಕ್ಕೂ ಆತಂಕ ಮೂಡುತ್ತದೆ. ಬೀದಿನಾಯಿಗಳಿಗೆಂದೇ ಶೆಡ್ ಮಾಡಿರಿ. ನಾವು ಅವುಗಳಿಗೆ ಆಹಾರ ಹಾಗೂ ಆರೋಗ್ಯ ಸೌಲಭ್ಯ ನೀಡುತ್ತೇವೆ ಎಂದು ಸಾಕಷ್ಟು ಸಂಘ ಸಂಸ್ಥೆಗಳು ಜನರು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲೂ ಕಾನೂನಿನ ಪ್ರಕಾರ ಈಗಷ್ಟೇ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಗಮನದಲ್ಲಿರಿಸಿಕೊಂಡು ಕ್ರಮ ಕೈಗೊಳ್ಳಬೇಕಿದೆ.ಕೆ.ಎಸ್.ರಮೇಶ್ ಮಡಿಕೇರಿ ನಗರಸಭೆಯ ಹಿರಿಯ ಸದಸ್ಯ.
ಅನಾಹುತ ಸಂಭವಿಸುವುದಕ್ಕೆ ಮುಂಚೆ ಎಚ್ಚೆತ್ತುಕೊಳ್ಳಿ: ನಾಯಿಗಳು ಈಗಿನಂತೆ ಹಿಂದೆಯೂ ಇದ್ದವು. ಅವುಗಳಿಗೆ ಜನರು ಹಿಂದೆ ಊಟ ಹಾಕುತ್ತಿದ್ದರು. ಜನರಿಗೆ ಸ್ವಲ್ಪವೂ ಸಹನೆಯೂ ಇಲ್ಲ. ಅಸಮತೋಲನ ಉಂಟಾಗಿದೆ. ನಗರಸಭೆಯು ನಾಯಿಗಳ ನಿಯಂತ್ರಣಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಕ್ರಮಗಳನ್ನೂ ಕಾನೂನು ಪ್ರಕಾರವೇ ಕೈಗೊಳ್ಳಬೇಕು. ಇದು ನಗರಸಭೆಯ ಜವಾಬ್ದಾರಿ. ಅನಾಹುತ ಸಂಭವಿಸುವುದಕ್ಕೆ ಮುಂಚೆ ಇದಕ್ಕೆ ಸಂಬಂಧಿಸಿ ಎಲ್ಲ ಇಲಾಖೆಯವರೂ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿತ್ತುಗೀತಾ ಗಿರೀಶ್ ಹಣಕಾಸು ಸಲಹೆಗಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.