ಸೋಮವಾರಪೇಟೆ: ತಾಲ್ಲೂಕಿನ ಗೌಡಳ್ಳಿ ಗ್ರಾಮದ ಮನೆಯೊಂದರಲ್ಲಿ ಸಂಗ್ರಹಿಸಿದ್ದ ಎರಡು ಲೀಟರ್ ಕಳ್ಳಬಟ್ಟಿ ಹಾಗೂ 50 ಲೀಟರ್ ಪುಳಿಗಂಜಿಯನ್ನು ಅಬಕಾರಿ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡು, ವ್ಯಕ್ತಿಯನ್ನು ಬಂಧಿಸಿದ್ದಾರೆ.
ಗಸ್ತು ಕಾರ್ಯ ನಡೆಸುವ ವೇಳೆ ಸಿಕ್ಕ ಮಾಹಿತಿ ಮೇರೆಗೆ ಉಪ ಅಧೀಕ್ಷಕರ ನೇತೃತ್ವದ ತಂಡ ಗ್ರಾಮದ ಸುಬ್ರಹ್ಮಣ್ಯ ಎಂಬುವವರ ಮನೆ ಮೇಲೆ ದಾಳಿ ನಡೆಸಿದೆ.
ಮನೆಯಲ್ಲಿದ್ದ 2 ಲೀಟರ್ ಕಳ್ಳಬಟ್ಟಿ ಹಾಗೂ ಮನೆಯ ಪಕ್ಕದ ಹಲಸಿನ ಮರದ ಬುಡದಲ್ಲಿ ಹೂತಿಟ್ಟಿದ್ದ 50 ಲೀಟರ್ ಪುಳಿಗಂಜಿಯನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪ್ರಭಾರ ಉಪ ಅಧೀಕ್ಷಕಿ ಆರ್.ಎಂ.ಚೈತ್ರಾ, ಅಬಕಾರಿ ನಿರೀಕ್ಷಕರಾದ ಎಂ.ಪಿ.ಸಂಪತ್ ಕುಮಾರ್, ಮುಖ್ಯ ಕಾನ್ಸ್ಟೆಬಲ್ ಕೆ.ವಿ.ಸುಮತಿ, ಅಬಕಾರಿ ಕಾನ್ಸ್ಟೆಬಲ್ಗಳಾದ ವೀರೇಶ್ ಕುಮಾರ್, ಹಿರಣ್ಣ ಮ್ಯಾಕೇರಿ ಹಾಗೂ ವಾಹನ ಚಾಲಕ ಜಿತೇಂದ್ರ ಪಾಲ್ಗೊಂಡಿದ್ದರು.