ಮಡಿಕೇರಿ: ಇಲ್ಲಿನ ಜೂನಿಯರ್ ಕಾಲೇಜು ಕಟ್ಟಡದಲ್ಲಿ ಆರು ತಿಂಗಳಿಂದ ದಾಸ್ತಾನು ಇಡಲಾಗಿದ್ದ ಸಂತ್ರಸ್ತರ ಪರಿಹಾರ ಸಾಮಗ್ರಿಗಳನ್ನು ಜಿಲ್ಲೆಯ ವಿವಿಧ ಮಕ್ಕಳ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಪೂರೈಕೆ ಮಾಡಲು ಕೊಡಗು ಜಿಲ್ಲಾಡಳಿತ ತೀರ್ಮಾನಿಸಿದೆ.
‘ದಾಸ್ತಾನು ಇಟ್ಟಿದ್ದ ಪರಿಹಾರ ಸಾಮಗ್ರಿಗಳು ಹಾಳಾಗುತ್ತಿವೆ’ ಎಂಬ ಆರೋಪಗಳು ಕೇಳಿ ಬಂದಿದ್ದವು. ಜಿಲ್ಲಾ ಪಂಚಾಯಿತಿ ಸಭೆಯಲ್ಲೂ ಚರ್ಚೆ ನಡೆದು ಸಂತ್ರಸ್ತರು ಹಾಗೂ ಅಗತ್ಯವಿರುವ ಸಂಸ್ಥೆಗಳಿಗೆ ವಿತರಣೆ ಮಾಡುವಂತೆ ತೀರ್ಮಾನಿಸಲಾಗಿತ್ತು.
ಸಂತ್ರಸ್ತರಿಗೆ ಮೊದಲ ಆದ್ಯತೆ ನೀಡಲಾಗುವುದು. ಉಳಿದಂತೆ ಜಿಲ್ಲಾಧಿಕಾರಿ ಅವರ ಸೂಚನೆಯ ಮೇರೆಗೆ ಪೂರೈಕೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಸುಂಟಿಕೊಪ್ಪಸ್ವಾಸ್ಥ್ಯಕೇಂದ್ರ, ಮಡಿಕೇರಿಯ ಸ್ತ್ರೀಶಕ್ತಿ ವೃದ್ಧಾಶ್ರಮ, ವಿಕಾಸ ಜನಸೇವಾ ಟ್ರಸ್ಟ್, ಹಿರಿಯ ನಾಗರಿಕರ ವೇದಿಕೆ, ಅಮೃತವಾಣಿ ಸಂಸ್ಥೆಯ ಪ್ರತಿನಿಧಿಗಳು ಆಹಾರ ಸಾಮಗ್ರಿ ಪಡೆಯಲು ಸೋಮವಾರ ಬಂದಿದ್ದರು.
ಸ್ವಾಸ್ಥ್ಯ ಸಂಸ್ಥೆಯ ಪ್ರತಿನಿಧಿ ಸತೀಶ್ ಮಾತನಾಡಿ, ಅಧಿಕಾರಿಗಳ ಸೂಚನೆಯಂತೆ ಬಂದಿದ್ದೇವೆ. 25 ಕೆ.ಜಿ ಅಕ್ಕಿ ನೀಡುತ್ತೇವೆಂದು ಅಧಿಕಾರಿಗಳು ತಿಳಿಸಿದ್ದು ಇದರಿಂದ ಮಕ್ಕಳ ಊಟಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ವಿಕಾಸ ಜನಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ಪ್ರತಿಕ್ರಿಯಿಸಿ, ‘ಜಿಲ್ಲಾಡಳಿತದ ಅನುಮತಿ ಪಡೆದುಕೊಂಡೇ ಆಹಾರ ಸಾಮಗ್ರಿಗಳನ್ನು ಪಡೆಯುತ್ತಿದ್ದೇವೆ. ಆದರೆ, ನಿರೀಕ್ಷಿಸಿದಷ್ಟು ಸಿಗುತ್ತಿಲ್ಲ. ಆದರೂ, ಗೋದಾಮಿನಲ್ಲಿ ದಾಸ್ತಾನಿಟ್ಟು ಹಾಳು ಮಾಡದೇ ಅಗತ್ಯವುಳ್ಳ ಸಂಸ್ಥೆಗಳಿಗೆ ವಿತರಣೆ ಮಾಡಬೇಕು’ ಎಂದು ಕೋರಿದರು.
‘ಮಡಿಕೇರಿ ಹಾಗೂ ಕುಶಾಲನಗರದಲ್ಲಿ ಗೋದಾಮಿನಲ್ಲಿ ಹೆಚ್ಚಿನ ಸಾಮಗ್ರಿಗಳು ಇವೆ. ಗೋದಾಮು ಪರಿಶೀಲಿಸಿದ್ದೇನೆ. ಆಹಾರ ಪದಾರ್ಥ ಪೋಲು ಹಾಗೂ ಕೆಡದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ’ ಎಂದು ಅವರು ತಿಳಿಸಿದರು.